ಕನ್ನಡಪ್ರಭ ವಾರ್ತೆ ಬೆಂಗಳೂರು

ಮಗಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಅಳಿಯನ ವಿರುದ್ಧ ಅತ್ತೆ ದಾಖಲಿಸಿದ್ದ ಅಪಹರಣ ಮತ್ತು ಮನೆ ಅತಿಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ರಾಜಾಜಿನಗರದ ನಿವಾಸಿ ಜ್ಯೋತಿ ಎಂಬುವರು ತನ್ನ ಮಗಳನ್ನು ಅಳಿಯ ಮುರಳಿ ಮತ್ತು ಆತನ ಸ್ನೇಹಿತರು ಅಪಹರಣ ಮಾಡಿದ್ದಾರೆ ಎಂದು 2026ರ ಫೆ.13ರಂದು ದೂರು ನೀಡಿದ್ದರು.

ಅಪಹರಣ ಹಾಗೂ ಅತಿಕ್ರಮ ಪ್ರವೇಶ ಆರೋಪದ ಮೇಲೆ ರಾಜಾಜಿನಗರ ಠಾಣಾ ಪೊಲೀಸರು ದಾಖಲಿಸಿದ ಎಫ್ಐರ್ ಹಾಗೂ ಅದಕ್ಕೆ ಸಂಬಂಧಿಸಿದ ನಗರದ 32ನೇ ಎಸಿಜೆಎಂ ಕೋರ್ಟ್ ವಿಚಾರಣೆ ರದ್ದು ಕೋರಿ ಮುರಳಿ, ಸ್ನೇಹಿತರಾದ ಮಂಜುನಾಥ ಹಾಗೂ ಚರಣ್‌ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಯಾರನ್ನು ಅಪಹರಣ ಮಾಡಿದ್ದೀರಿ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಕೇಳಿತು. ಅರ್ಜಿದಾರರ ಪರ ವಕೀಲರು, ಪತ್ನಿಯನ್ನು ಎಂದಾಗ ಅಶ್ಚರ್ಯ ಪಟ್ಟ ಅವರು ಪತ್ನಿಯನ್ನು ಏಕೆ ಅಪಹರಣ ಮಾಡಿದಿರಿ ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಅಪಹರಣ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದಷ್ಟೇ ಎಂದು ಉತ್ತರಿಸಿದರು.


ಆಗ ನ್ಯಾಯಪೀಠ, ''''''''ಮದುವೆಯಾಗಿದ್ದರೆ ಮತ್ಯಾಕೆ ಅಪಹರಣ ಪ್ರಕರಣ ದಾಖಲಿಸಲಾಗಿದೆ? ಪತಿ-ಪತ್ನಿ ಒಟ್ಟಿಗೆ ವಾಸ ಮಾಡುತ್ತಿದ್ದಾರೆಯೇ'''''''' ಮತ್ತೆ ಪ್ರಶ್ನೆ ಕೇಳಿತು.

ಅರ್ಜಿದಾರರ ಪರ ವಕೀಲರು, ''''''''ಮೊದಲ ಅರ್ಜಿದಾರ ಮುರಳಿ ದೂರುದಾರೆಯ ಪುತ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪತ್ನಿ ತವರು ಮನೆಗೆ ಹೋಗಿದ್ದರು.‌ ಮುರಳಿ ಅತ್ತೆ ಮನೆಗೆ ಹೋಗಿ ಪತ್ನಿಯನ್ನು ಕರೆತಂದಿರುವುದಕ್ಕೆ ಅಪಹರಣ ಹಾಗೂ ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಮುರಳಿ ಹಾಗೂ ದೂರುದಾರೆಯ ಪುತ್ರಿ ಸದ್ಯ ಒಂದೇ ಮನೆಯಲ್ಲಿ ಜೊತೆಯಾಗಿ ಜೀವಿಸುತ್ತಿದ್ದಾರೆ'''''''''''''''' ಎಂದು ತಿಳಿಸಿದರು.

ಈ ವಾದ ಪರಿಗಣಿಸಿದ ಪೀಠ, ‌ಮುರಳಿಯು ದೂರುದಾರೆಯ ಮನೆಗೆ ಹೋಗಿ ಪತ್ನಿಯನ್ನು ಕರದುಕೊಂಡು ಹೋದ ಕಾರಣಕ್ಕೆ ಈ ಪ್ರಕರಣ ದಾಖಲಾಗಿಸಲಾಗಿದೆ‌. ಆದ್ದರಿಂದ ಅರ್ಜಿದಾರರಿಗೆ ಸಂಬಂಧಿಸಿದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಮಧ್ಯಂತರ ಆದೇಶ ಮಾಡಿತು.

ನಂತರ ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜಾಜಿನಗರ ಠಾಣಾ ಪೊಲೀಸರು ಮತ್ತು ದೂರುದಾರೆಯಾದ ಮುರಳಿ ಅವರ ಅತ್ತೆ ಜ್ಯೋತಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.