ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
"ಕಾಲ ಸೃಷ್ಟಿಸಿದ ಅಸಾಮಾನ್ಯ ಪ್ರತಿಭೆ ಕುವೆಂಪು " ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು. ಅವರು ನಗರದ ಸಂಸ್ಕೃತ ಭವನದಲ್ಲಿ ಏರ್ಪಡಿಸಲಾಗಿದ್ದ "ಭಾರತೀ ದರ್ಶನ " ಸರಣಿ ಉಪನ್ಯಾಸ ಮಾಲಿಕೆಯಲ್ಲಿ 18ನೇ ಉಪನ್ಯಾಸವಾಗಿ "ಕುವೆಂಪುರವರ ಕೃತಿ ದರ್ಶನ " ಕುರಿತಾಗಿ ಪ್ರಧಾನ ಭಾಷಣ ಮಾಡಿದರು.ಮಲೆನಾಡಿನಲ್ಲಿ ಹುಟ್ಟು, ರಾಮಕೃಷ್ಣಾಶ್ರಮದ ಪ್ರಭಾವ , ಗ್ರೀನ್ ಜೊತೆಗಿನ ಭೇಟಿ , ಟಿ ಎಸ್ ವೆಂಕಣ್ಣಯ್ಯ ರವರ ಸಂಪರ್ಕ, ಎ ಆರ್ ಕೃಷ್ಣ ಶಾಸ್ತ್ರಿಗಳ ಮಾರ್ಗದರ್ಶನದಿಂದ ಮೊದಲ ಬ್ಯಾಚ್ ಕನ್ನಡ ಎಂ ಎ ಸೇರಿದ್ದು, ಬಿ ಎಂ ಶ್ರೀ ಅವರ ಇಂಗ್ಲಿಷ್ ಗೀತೆ ಹೊರಬಂದು ನವೋದಯ ಸಾಹಿತ್ಯಕ್ಕೆ ಮುನ್ನುಡಿ ಬರೆದದ್ದು ಆ ಕಾಲಘಟ್ಟದಲ್ಲಿ ನಡೆದು ಕೆ ವಿ ಪುಟ್ಟಪ್ಪ ಕುವೆಂಪುಗಳಾಗಿ ರೂಪುಗೊಂಡು ವಿಶ್ವಮಾನ್ಯರಾಗಲು ಕಾರಣವಾದವು ಎಂದರು.
ಮಹಾಕಾವ್ಯಗಳ ಯುಗ ಮುಗಿದು ಹೋಯಿತು ಎನ್ನುವ ಸಂದರ್ಭದಲ್ಲಿ ರಚಿತವಾದ ಶ್ರೀ ರಾಮಾಯಣ ದರ್ಶನಂ "ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ಯೂಹ ರಚನೆಯೊಳ್ " ಎಂಬ ದರ್ಶನದ ಮೂಲಕ ಒಳಿತು ಕೆಡುಕು, ಪಾಪ- ಪುಣ್ಯ, ನಾಯಕ, ಖಳ... ಹೀಗೆ ಎಲ್ಲವೂ ಒಂದೇ ಆಗಿರುವ ವ್ಯಕ್ತಿಯು ತನ್ನ ಅವಗುಣಗಳನ್ನು ಸನ್ನಿವೇಶ, ಸಹಚರರ ಒಡನಾಟದಿಂದ, ಒಳಿತಿನೆಡೆಗೆ ಸಾಗುವ ಯಾನವಾಗಿದೆ. ಪಾಪಿಯಾದವನು ಉದ್ಧಾರದೆಡೆಗೆ ಸಾಗಲು ಈ ಜಗತ್ತಿನಲ್ಲಿ ಅನಂತ ಅವಕಾಶಗಳಿವೆ ಎಂಬ ದರ್ಶನವನ್ನು ಸಾಕ್ಷೀಕರಿಸಲು ಶ್ರೀರಾಮಾಯಣದರ್ಶನಂನ ಮಮತೆಯ ಸುಳಿ ಮಂಥರೆ, ದಶಾನನ ಸ್ವಪ್ನಸಿದ್ದಿ, ಲಂಕೇಶನೊಲಿಸಿದನು ಮಾರೀಚನಂ, ನೀಂ ಸತ್ಯವ್ರತನೆ ದಿಟಂ, ಕಾವ್ಯಭಾಗಗಳು, ಮಂಥರೆ, ಕೈಕೆ, ವಾಲಿ, ಮಾರೀಚ, ಚಂದ್ರನಖಿ, ರಾವಣ.. ಹೀಗೆ ಮೂಲ ರಾಮಾಯಣದಲ್ಲಿ ಚಿತ್ರಿತವಾದ ದುಷ್ಟ ಪಾತ್ರಗಳೆಲ್ಲವೂ ಮಹಾಕವಿಯ ಅನುಕಂಪದ ಅಲೆಯಲ್ಲಿ ಪಶ್ಚಾತ್ತಾಪಪಡುತ್ತಾ ರಾಮ, ಸೀತೆ, ಲಕ್ಷ್ಮಣ, ಹನುಮಂತನಂತಹ ಉದಾತ್ತ ಪಾತ್ರಗಳ ಸಂಸರ್ಗದಿಂದ ರಾವಣ, ಮಂಥರೆ, ಶೂರ್ಪನಖಿಯಂಥ ಪಾತ್ರಗಳೆಲ್ಲವೂ ಆತ್ಮೋದ್ಧಾರದ, ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆದು ಸಾರ್ಥಕತೆಯನ್ನು ಕಂಡುಕೊಳ್ಳುತ್ತವೆ. ಪ್ರತಿಮಾದೃಷ್ಟಿಯಲ್ಲಿ ಕಂಡುಕೊಳ್ಳುವುದಾದರೆ "ರಾಮನಿಗಿಂತ ರಾಮನಾಮದ ಪ್ರಭಾವ ಮಿಗಿಲಾದುದು ಎಂದು ಹನುಮಂತ ಇಲ್ಲಿ ಸಾರಿದ್ದಾನೆ'''''''' ಎಂದರು.ಜಿಲ್ಲಾ ಗಮಕ ಕಲಾಪರಿಷತ್ನ ಅಧ್ಯಕ್ಷ ಗಣೇಶ್ ಉಡುಪರವರು ಮಾತನಾಡಿ, ''''''''ಕುವೆಂಪುರವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನೂರೊಂದು ದಿನಗಳ ಕಾಲ ಸತತವಾಗಿ ಮತ್ತು ಒಂದು ವರ್ಷಗಳ ಕಾಲ ರಾಮಾಯಣ ದರ್ಶನಂ ವಾಚನ, ವಾಖ್ಯಾನವನ್ನು ಶ್ರೀ ವಿವೇಕಾನಂದ ಯೋಗಶಾಲೆಯಲ್ಲಿ ಏರ್ಪಡಿಸಿ ಕುವೆಂಪುರವರಿಗೆ ಗೌರವ ಸಲ್ಲಿಸಲಾಗಿತ್ತು. ಅಂತೆಯೇ ಕುವೆಂಪುರವರ ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸಲು ಗಮಕಿಗಳು ಗಮಕ ಸಾಹಿತ್ಯ ಪರಿಷತ್ತಿನ ಮೂಲಕ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಶಾಲಾಕಾಲೇಜುಗಳಲ್ಲಿ ಸರ್ಕಾರಿ ಸಮಾರಂಭಗಳಲ್ಲಿ ವಾಚನ, ವ್ಯಾಖ್ಯಾನ ಏರ್ಪಡಿಸುವುದರ ಮೂಲಕ ಮಹಾನ್ ಕವಿಗಳ ಕೃತಿಯನ್ನು ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತಲುಪಿಸಲು ಸಹಾಯಮಾಡಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ಸಂಸ್ಕೃತ ಸಂಘದ ವತಿಯಿಂದ ಲೇಖಕ ಗೊರೂರು ಶಿವೇಶ್ ಅವರನ್ನು ಕಾರ್ಯಕ್ರಮದ ಸಂಯೋಜಕ ಪರಮೇಶ್ವರ ಭಟ್ ಗೌರವಿಸಿದರು. ಭಾರತೀಯ ದರ್ಶನದ ಕಾರ್ಯಕ್ರಮದ ಸಂಯೋಜಕ ಪರಮೇಶ್ವರ ಭಟ್, ವಿಶ್ರಾಂತ ಪ್ರಾಂಶುಪಾಲರಾದ ಅನುಸೂಯ, ಹೃದಯ ರೋಗ ತಜ್ಞ ಡಾ. ಅನೂಪ್, ರಮೇಶ್, ಮುಖ್ಯ ಶಿಕ್ಷಕ ರಮೇಶ್ , ಸಂಸ್ಕೃತ ಭವನದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.