ರಥ ಸಾಗುವ ಮುಂದೆ ಗಾರುಡಿ ಗೊಂಬೆ ಕುಣಿತ, ಗೊರವರ ಕುಣಿತ, ಕಂಸಾಳೆ ಕುಣಿತದ ಜತೆಗೆ ಮಂಗಳವಾದ್ಯ ಮೊಳಗುತ್ತಿದ್ದರೆ ಭಕ್ತರು ತೇರಿನ ಮುಂದೆ ನಡೆದುಕೊಂಡು ಜೈಕಾರ ಹಾಕಿದರು, ಗ್ರಾಮದ ನೂರಾರು ಮಂದಿ ಯುವಕರು ಮಾತ್ರ ಕುಣಿದು ಕುಪ್ಪಳಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ತೆರಕಣಾಂಬಿ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ರಥೋತ್ಸವ ಭಾರತ ಹುಣ್ಣಿಮೆಯಂದು ಭಾನುವಾರ ಸಂಭ್ರಮದಿಂದ ನಡೆಯಿತು.ಗ್ರಾಮದ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದ ಆವರಣದಲ್ಲಿ ಶೃಂಗರಿಸಿದ್ದ ತೇರಿನಲ್ಲಿ ಬೆಳಗ್ಗೆ ೯.೩೦ಕ್ಕೆ ದೇವರ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
೧೨.೪೫ಕ್ಕೆ ತಹಸೀಲ್ದಾರ್ ಎಂ.ಎಸ್.ತನ್ಮಯ್ ಲಕ್ಷ್ಮೀ ವರದರಾಜಸ್ವಾಮಿಗೆ ಸಹಸ್ರಾರು ಭಕ್ತರು ಸಮ್ಮುಖದಲ್ಲಿ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ಗ್ರಾಮದ ದೇವಸ್ಥಾನದ ಆವರಣದಿಂದ ಚಾಮರಾಜನಗರ- ಗುಂಡ್ಲುಪೇಟೆ ರಸ್ತೆಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ತೇರಿನ್ನು ಎಳೆದರು. ಗ್ರಾಮದ ಶೃಂಗಾರ ಆಂಜನೇಯಸ್ವಾಮಿ ದೇವಾಲಯದ ಸುತ್ತು ಹಾಕಿದ ನಂತರ ಚಾಮರಾಜನಗರ- ಗುಂಡ್ಲುಪೇಟೆ ರಸ್ತೆಯಲ್ಲಿ ಸಾಗಿ ದೇವಸ್ಥಾನದ ಆವರಣಕ್ಕೆ ಸಂಜೆ ತಲುಪಿತು.
ರಥ ಸಾಗುವ ಮುಂದೆ ಗಾರುಡಿ ಗೊಂಬೆ ಕುಣಿತ, ಗೊರವರ ಕುಣಿತ, ಕಂಸಾಳೆ ಕುಣಿತದ ಜತೆಗೆ ಮಂಗಳವಾದ್ಯ ಮೊಳಗುತ್ತಿದ್ದರೆ ಭಕ್ತರು ತೇರಿನ ಮುಂದೆ ನಡೆದುಕೊಂಡು ಜೈಕಾರ ಹಾಕಿದರು, ಗ್ರಾಮದ ನೂರಾರು ಮಂದಿ ಯುವಕರು ಮಾತ್ರ ಕುಣಿದು ಕುಪ್ಪಳಿಸಿದರು.ರಥ ಸಾಗುವ ದಾರಿಯ ೨ ಬದಿಯ ಮನೆಯ ಮನೆ ಹಾಗೂ ಅಂಗಡಿಗಳ ಮುಂದೆ ಪಾನಕ, ಮಜ್ಜಿಗೆ ಹಾಗೂ ನೀರು ವಿತರಿಸಿದರು. ಇನ್ನು ಕೆಲ ಹರಕೆ ಹೊತ್ತವರು ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಿದರು.
ಲಕ್ಷ್ಮೀ ವರದರಾಜಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರ ಜೊತೆಗೆ ಜಿಲ್ಲೆ ಹಾಗೂ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಬೇಗೂರು ಸರ್ಕಲ್ ಇನ್ಸ್ಪೆಕ್ಟರ್ ಮೋಹಿತ್ ಸಹದೇವ್ ನೇತೃತ್ವದಲ್ಲಿ ತೆರಕಣಾಂಬಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಡಿವೈಎಸ್ಪಿ ಸ್ನೇಹರಾಜ್ ಇದ್ದರು.
ಬದಲಿ ಸಂಚಾರ: ಗ್ರಾಮದ ರಥೋತ್ಸವದ ಹಿನ್ನೆಲೆ ಗುಂಡ್ಲುಪೇಟೆ- ಚಾಮರಾಜ ನಗರ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗವಾಗಿ ತ್ರಿಯಂಬಕಪುರ ಗೇಟ್ನಿಂದ ಬೆರಟಹಳ್ಳಿ ಮಾರ್ಗ ತೆರಕಣಾಂಬಿಹುಂಡಿ ಮಾರ್ಗ ಸಂಚಾರ ವ್ಯವಸ್ಥೆ ಪೊಲೀಸರು ಮಾಡಿದ್ದರು.