ಕನ್ನಡಪ್ರಭ ವಾರ್ತೆ ಬೆಳಗಾವಿ
ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ ಹಾಗೂ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದ ಛತ್ರಪತಿ ಶಾಹು ಮಹಾರಾಜ ಅವರ ಜಯಂತಿಯನ್ನು ಸರ್ಕಾರಿ ವತಿಯಿಂದ ಆಚರಿಸಬೇಕು ಮತ್ತು ಬೆಳಗಾವಿಯಲ್ಲಿ ಅವರ ಪುತ್ಥಳಿಯನ್ನು ಆದಷ್ಟು ಬೇಗ ಪ್ರತಿಷ್ಠಾಪಪಿಸಬೇಕು ಎಂದು ಬೆಳಗಾವಿ ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹಿಸಿ, ಮಂಗಳವಾರ ಸಚಿವ ಸತೀಶ ಜಾಕಿಹೋಳಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.ಜೂ.26 ರಂದು ಮಹಾನ್ ದಾರ್ಶನಿಕ ಛತ್ರಪತಿ ಶಾಹು ಮಹಾರಾಜರ ಜಯಂತಿ ಇದೆ. ಈ ದಿನವನ್ನು ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಜಯಂತಿಯನ್ನಾಗಿ ಆಚರಿಸಬೇಕು. ನಗರದ ಕೆ.ಎಲ್.ಇ ಆಸ್ಪತ್ರೆ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಬಳಿ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಈಗಾಗಲೇ ಮಂಜೂರಾಗಿರುವ ಶಾಹು ಮಹಾರಾಜರ ಪುತ್ಥಳಿಯನ್ನು ಸರ್ಕಾರವು ಆದಷ್ಟು ಬೇಗನೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. 1874ರ ಜೂನ್ 26 ರಂದು ಜನಿಸಿದ ಇವರ ಮೂಲ ಹೆಸರು ಯಶವಂತರಾವ್ ಘಾಟಗೆ. ಇವರ ಪೂರ್ವಿಕರು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾಗಿದ್ದರಿಂದ ಇವರಿಗೆ ಛತ್ರಪತಿ ಬಿರುದು ಸ್ವಾಭಾವಿಕವಾಗಿ ಬಂದಿದೆ. ಇವರ ಶಿಕ್ಷಣ ಸೇವೆಯನ್ನು ಪರಿಗಣಿಸಿ ಲಂಡನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು 1902 ಜೂನ್ 10 ರಂದು ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ. ಮಹಾತ್ಮ ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜ ಚಳವಳಿಯನ್ನು ಮುಂದುವರೆಸಿದರು. ವಿಧವಾ ಪುನರ್ ವಿವಾಹ ಪದ್ಧತಿಯನ್ನು ಜಾರಿಗೆ ತಂದರು. 1918 ರಲ್ಲಿ ಮಹರ್ ವತನ್ ಪದ್ಧತಿ ಹಾಗೂ ವಂಶಾವಳಿಯಾಗಿ ಬಂದಿದ್ದ ಜೀತ ಪದ್ಧತಿಯನ್ನು ನಿಷೇಧಿಸಿದರು. 1919 ರಲ್ಲಿ ಅಸ್ಪೃಶ್ಯತಾ ಆಚರಣೆ ವಿರುದ್ಧ ಕಠಿಣ ಕಾನೂನು ತಂದರಲ್ಲದೆ, ಅದೇ ವರ್ಷ ಜುಲೈ 12 ರಂದು ಅಂತರಜಾತಿ ವಿವಾಹ ಕಾಯ್ದೆಯನ್ನು ಜಾರಿಗೆ ತಂದರು. 1920 ಜುಲೈ 17 ರಂದು ದೇವದಾಸಿ ಪದ್ಧತಿ ನಿರ್ಮೂಲನಾ ಕಾನೂನನ್ನು ಜಾರಿಗೆ ತಂದರು. 1920 ಮೇ 30 ರಂದು ನಾಗಪುರದಲ್ಲಿ ಡಿಪ್ರೆಸ್ಡ್ ಕಾಸ್ಟ್ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಮೂಲಕ ಹಿಂದೂಳಿದವರ ಮತ್ತು ದಮನಿತರ ಆಶಾಕಿರಣವಾಗಿದ್ದ ಇವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿ ಕೊಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಇವರ ಜಯಂತಿ ಆಚರಿಸುವಂತಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಧನಪಾಲ ಅಗಸಿಮನಿ, ಹಣಮಂತ ಮದ್ದಾಳೆ, ದುರ್ಗೆಶ ಮೇತ್ರಿ, ಪರಶುರಾಮ ಕಾಂಬಳೆ, ಪ್ರಕಾಶ ಕೋಲಕಾರ, ಕೃಷ್ಣಾ ಕಾಂಬಳೆ ಇದ್ದರು.