ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಕೆಲಸವಾಗಲಿ: ಕೆ.ಅನಂತಪದ್ಮನಾಭ ಕಿಣಿ

| Published : Jun 16 2025, 02:30 AM IST

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಕೆಲಸವಾಗಲಿ: ಕೆ.ಅನಂತಪದ್ಮನಾಭ ಕಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂಥ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಅನಂತಪದ್ಮನಾಭ ಕಿಣಿ ಹೇಳಿದರು.

ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆ ವತಿಯಿಂದ ನೀಡಿದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ಉಡುಪಿ ಜಿಲ್ಲಾ​ ವರದಿಗಾರರಾದ ಕಿರಣ್ ಮಂಜನಬೈಲು ಅವರಿಗೆ ‘ಯಶೋ ಮಾಧ್ಯಮ-2025’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಡಾ.ಟಿ.ಎಂ.ಎ. ಪೈ ಹಾಗೂ ಡಾ. ಬಿ.ವಿ.ಬಾಳಿಗ ಅವರಂತಹ ಮಹಾನ್ ವ್ಯಕ್ತಿಗಳು ಓದಿದಂತಹ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ ಎಂದು ಮುಚ್ಚಬಾರದು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳು ಈ ಶಾಲೆಗೆ ಹೆಚ್ಚು ಬರುವಂತೆ ಮಾಡಬೇಕು. ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸಿ ಹೆಚ್ಚು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು ಎಂದರು.​ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಉಡುಪಿ​ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತರಾದ ಜನಾರ್ದನ್ ಕೊಡವೂರು ಮಾತನಾಡಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸ್ವಂತ ನೆಲೆಯನ್ನು ​ಕಟ್ಟಿದ ಹಾಗೂ ಸಮಾಜಸೇವೆ, ಸಾಂಸ್ಕೃತಿಕ ಸೇವೆಗಳನ್ನು ಸಲ್ಲಿಸುತ್ತಾ ಅನೇಕ ಸಾಧನೆ ಮಾಡಿದ ​ಪತ್ರಕರ್ತ ಕಿರಣ್ ಮಂಜನಬೈಲು ಅವರಿಗೆ ಸ್ಪಂದನ ಸೇವಾ ಸಂಸ್ಥೆಯು​ ಯಶೋ​ ಮಾಧ್ಯಮ​ -2025 ಪ್ರಶಸ್ತಿ ನೀಡಿ​ ಗೌರವಿಸಿರುವುದು ಶ್ಲಾಘನೀಯ ಎಂದರು.

ಪ್ರಶಸ್ತಿ ಪುರಸ್ಕೃತರಾದ ಕಿರಣ್ ಮಂಜನಬೈಲು ಮಾತನಾಡಿ, ಸಮಾಜಕ್ಕೆ ನಾನು ಉತ್ತಮ ವರದಿಗಳನ್ನು, ಸುದ್ದಿಗಳನ್ನು ನೀಡುವ ಮೂಲಕ ಸಣ್ಣ ಸೇವೆ ಮಾಡಿದ್ದೇನೆ. ಸ್ಪಂದನಾ ಸೇವಾ ಸಂಸ್ಥೆಯು ಈ ನನ್ನ ಸಣ್ಣ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಚಿರಋಣಿ. ಸ್ಪಂದನ ಸೇವಾ ಸಂಸ್ಥೆಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.​ಉಡುಪಿ​ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಿಕಟಪೂರ್ವ ​ಅಧ್ಯಕ್ಷೆ ಡಾ.ರಾಜಲಕ್ಷ್ಮೀ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಡಾ. ಮರಿಯಾ ಪಾಯಸ್, ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ​ಹಫೀಜ್​ ರೆಹಮಾನ್, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಂಯೋಜಕ ಸುಬ್ರಹ್ಮಣ್ಯ ಕಾರಂತ್, ಸುಮನ ಎಸ್. ಪೈ ಮಾತನಾಡಿದರು.

ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪೈ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಸಂತೋಷ್ ಕಾಮತ್ ವಂದಿಸಿದರು. ಖಜಾಂಚಿ ರಜನಿ ವಿ. ಪೈ,​ ಸ್ಪಂದನಾ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್, ​ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.