ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಉದ್ದಾರಕ್ಕಾಗಿ ಕೊಟ್ಟಿರುವ ಸಂಸ್ಕಾರಯುತ ಧಮ್ಮ ಮಾರ್ಗದಲ್ಲಿ ಸಾಗಬೇಕು ಎಂದು ತಿ.ನರಸೀಪುರ ನಳಂದ ಬುದ್ಧ ವಿಹಾರದ ಭಂತೆ ಬೋಧಿರತ್ನ ಹೇಳಿದರು.ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ನಡೆದ ವಿಶ್ವಜ್ಞಾನಿ ಡಾ.ಅಂಬೇಡ್ಕರ ಅವರ ಪ್ರತಿಮೆ ಹಾಗೂ ಗ್ರಂಥಾಲಯ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕುಟುಂಬದಲ್ಲಿ ಸಂಸ್ಕಾರ ಇದ್ದಾಗ ಮಕ್ಕಳು ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲರೂ ಸಾಮೂಹಿಕ ಬದಲಾವಣೆ ಕಂಡುಕೊಂಡು ಎಲ್ಲವೂ ಬದಲಾಗಿದೆ ಆದರೆ ಮಾನಸಿಕ ಗುಲಾಮಗಿರಿ ಬದಲಾಗಿಲ್ಲ. ನಮ್ಮಲ್ಲಿ ಸಂಸ್ಕಾರದ ಕೊರತೆ ಇದೆ ಎಂದರು. ಅಂಬೇಡ್ಕರ್ ಅವರ ಪರಿವರ್ತನ ವಿಚಾರಧಾರೆಗಳು, ಚಿಂತಕರ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡು ಸತ್ಯ ಯಾವುದು, ಸುಳ್ಳು ಯಾವುದು, ಅದನ್ನು ಮನಗಂಡು ಸತ್ಯಕ್ಕೆ ನಾವು ಶರಣದಾದರೆ ಕುಟುಂಬಗಳು ಬಹಳ ಅತಿ ವೇಗವಾಗಿ ಉನ್ನತಿ ಕಡೆ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಮೌಢ್ಯ, ದುಶ್ಚಟಗಳಿಂದ ದೂರವಿದ್ದು, ಧಮ್ಮ ಮಾರ್ಗದಲ್ಲಿ ಸಾಗಿದರೆ ಮಾತ್ರ ಉನ್ನತ ಸಮುದಾಯ ಕಟ್ಟಲು ಸಾಧ್ಯವಾಗುತ್ತದೆ ಎಂದರು. ಹೊರದೇಶದವರಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳು ಪರಿಣಾಮ ಬೀರಿತು. ಆದರೆ ನಾವು ಬಹಳ ವಿಜೃಂಭಣೆಯಿಂದ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತೇವೆ. ಆದರೆ ಅವರ ವಿಚಾರಧಾರೆಗಳನ್ನು ಅನುಸರಿಸುವಲ್ಲಿ ಹಿಂದೇಟು ಹಾಕುತ್ತಿದ್ದೇವೆ. ಸ್ವಾವಲಂಬನೆ, ಸ್ವಾಭಿಮಾನವನ್ನು, ಉನ್ನತಿಯನ್ನು ಕಟ್ಟಿಕೊಳ್ಳುವಂತಹ. ಅಂಬೇಡ್ಕರ್ ಪುತ್ಥಳಿ, ಗ್ರಂಥಾಲಯ ದೇಶಕ್ಕೆ ಮಾದರಿ ಆಗಬೇಕಾ ? ಪರಾವಲಂಬನೆ, ನಮ್ಮನ್ನು ಗುಲಾಮಗಿರಿಗೆ ಮಾನಸಿಕ ದುಸ್ಥಿತಿಗೆ ತಳ್ಳುವಂತಹ ಗುಡಿಗೋಪುರಗಳು, ಚರ್ಚ್ಗಳು, ಮಸೀದಿಗಳು ಮಾದರಿ ಆಗಬೇಕಾ.? ಇದನ್ನು ಅಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರಬೇಕು ಆಗ ಅಂಬೇಡ್ಕರ್ ಪುತ್ಥಳಿ, ಗ್ರಂಥಾಲಯ ನಿರ್ಮಾಣ ಮಾಡಿದ್ದು ಸಾರ್ಥಕತೆ ಆಗುತ್ತದೆ ಎಂದರು. ಅಂಬೇಡ್ಕರ್ ಪುತ್ಥಳಿ, ಗ್ರಂಥಾಲಯ ಮಾಡಿ ಮಕ್ಕಳಿಗೆ, ಯುವಕರಿಗೆ ಸಂಸ್ಕಾರವೇ ಇಲ್ಲ ಅಂದಾಗ ಏನು ಸಾಧನೆ ಮಾಡಲು ಸಾಧ್ಯವೇ ಇಲ್ಲ. ತ್ಯಾಗಮಯಿ ಅಂಬೇಡ್ಕರ್ ಅವರು ಮಾನಸಿಕ ಗುಲಾಮಗಿರಿಯಿಂದ ಹೊರಬರಲು ನೀಡಿರುವ ಧಮ್ಮವನ್ನು ಅನುಸರಿಸಬೇಕು. ನಮಗೆ ಎಲ್ಲವನ್ನು ಕೊಟ್ಟ ಅಂಬೇಡ್ಕರ್ ಅವರನ್ನು ಒಂದು ದಿನದ ಮಟ್ಟಿಗೆ ಪೂಜಿಸಿ ಮರೆತು ಬಿಡುವ ಕೆಲಸ ಆಗುತ್ತಿದೆ ಎಂದರು.ಅಂಬೇಡ್ಕರ್ ಪ್ರತಿಮೆ ಚೈತನ್ಯದ ಚಿಲುಮೆ:
ಸಾಹಿತಿ ಡಾ.ಬಿ.ಆರ್.ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಅಂಬೇಡ್ಕರ್ ಅವರ ಶ್ರಮ, ಭೌತಿಕ ಶಕ್ತಿಯಿಂದ ನಾವೆಲ್ಲರೂ ಇಂದು ಸೇರಿದ್ದೇವೆ ಅವರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಇಡೀ ಜಗತ್ತೆ ಎದುರು ನೋಡುವಂತಹ ಅವರ ಜ್ಞಾನ, ತಿಳಿವಳಿಕೆ, ಬುದ್ಧಿಯನ್ನು ಗಮನಿಸುವಂತಹ, ಅನುಸರಣೆ ಮಾಡುವಂತಹ ಏಕೈಕ ವ್ಯಕ್ತಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಒಬ್ಬರೇ. ಅಂತಹ ಮಹಾನ್ ಜ್ಞಾನಿ ಬದುಕಿದ್ದಾಗಲೇ 1951ರಲ್ಲಿ ಅವರ ಪ್ರತಿಮೆಯನ್ನು ಕೊಲ್ಲಾಪುರದಲ್ಲಿ ಸ್ಥಾಪಿಸಲಾಗಿದೆ. ಅನಂತರ 1961ರಲ್ಲಿ ದೆಹಲಿ ಸಂಸತ್ ಭವನದ ಎದುರು ಸ್ಥಾಪಿಸಲಾಗಿದೆ. ಪ್ರತಿ ಗ್ರಾಮದಲ್ಲೂ ಪ್ರತಿಮೆ ನಿರ್ಮಾಣ ಮಾಡುವ ಕೆಲಸ ಆಗುತ್ತಿದ್ದು ಬಿಸಲವಾಡಿಯಲ್ಲಿ ಅಂಬೇಡ್ಕರ್ ಪ್ರತಿಮೆ, ಗ್ರಂಥಾಲಯ ನಿರ್ಮಾಣ ಕಾರ್ಯ ಆಗುತ್ತಿದ್ದು, ಅಂಬೇಡ್ಕರ್ ಪ್ರತಿಮೆ ನಮಗೆಲ್ಲರಿಗೂ ಚೈತನ್ಯದ ಚಿಲುಮೆ ಆಗಿದ್ದು, ಅದರ ಮೂಲಕ ಸ್ಫೂರ್ತಿ ಪಡೆದು ಮುಂದುವರೆಯಬೇಕಿದೆ. ಅ ಹಿನ್ನಲೆಯಲ್ಲಿ ಈ ಪ್ರತಿಮೆ ನಿರ್ಮಾಣ ಆಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಬಾಲರಾಜು, ವಕೀಲರಾದ ಮಲ್ಲಿಕ್ ಯಲಕ್ಕೂರು, ಮುಖಂಡ ನಾಗರಾಜು, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಶಿವಕುಮಾರ್, ಬಿಎಸ್ ಐ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಜನಶಕ್ತಿ ಸುರೇಶ್, ಯಜಮಾನರಾದ ಸಿ.ಮಹದೇವಯ್ಯ, ವಿ.ರಮೇಶ್, ಶಿವಸ್ವಾಮಿ, ನಿವೃತ್ತ ಮುಖ್ಯ ಶಿಕ್ಷಕ ಆರ್.ನಾಗರಾಜು, ಸಾಹಿತಿ ಬಿಸಲ್ವಾಡಿ ಸೋಮಶೇಖರ್ , ನಿವೃತ್ತ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಉಮೇಶ್ ಕುದರ್, ವಕೀಲರಾದ ರಾಮಸಮುದ್ರ ಪುಟ್ಟಸ್ವಾಮಿ, ವಿಜಯಕುಮಾರ್, ತಾಲೂಕು ಸರ್ಕಾರಿ ಶಿಕ್ಷಕರ ಸಂಘದ ನಿರ್ದೇಶಕ ನಟರಾಜು, ಪಾಪಣ್ಣ, ಪ್ರಕಾಶ್, ಗ್ರಾಮದ ಸರ್ಕಾರಿ ನೌಕರರು, ನಿವೃತ್ತ ನೌಕರರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಇತರರು ಹಾಜರಿದ್ದರು. ಪ್ರಾಂಶುಪಾಲ ಮೂರ್ತಿ ಪ್ರಾರ್ಥಿಸಿದರು, ಶಿಕ್ಷಕ ಸಿದ್ದರಾಜು ಸ್ವಾಗತಿಸಿದರು.