ಕನ್ನಡಪ್ರಭವಾರ್ತೆ ತಿಪಟೂರು ೧೨ನೇ ಶತಮಾನದಲ್ಲಿ ಇದ್ದಂತಹ ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದವರು ಬಸವೇಶ್ವರರಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲೇ ನಾವೆಲ್ಲರೂ ನಡೆಯೋಣ ಎಂದು ಶಾಸಕ ಕೆ. ಷಡಕ್ಷರಿ ರವರು ತಿಳಿಸಿದರು.

ತಾಲೂಕು ಆಡಳಿತಸೌಧದ ಸಭಾಂಗಣದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಸಾಮಾಜಿಕ ಸುಧಾರಣೆಗೆ ಹೋರಾಟ ನಡೆಸಿ ಸಮಾನತೆಗೆ ಪಣತೊಟ್ಟು ಜಗಜ್ಯೋತಿ ವಿಶ್ವಜ್ಞಾನಿ ಅನ್ನಿಸಿಕೊಂಡಿರುವ ಬಸವೇಶ್ವರರು ೧೨ನೇ ಶತಮಾನದಲ್ಲಿದ್ದಂತಹ ಜಾತಿ ಪದ್ಧತಿಯ ಅಸಮಾನತೆ ವಿರುದ್ಧ ಹೋರಾಟ ನಡೆಸಿದರು. ಅನುಭವ ಮಂಟಪದ ಮೂಲಕ ವಿಶ್ವದಲ್ಲಿ ಪ್ರಥಮ ಪಾರ್ಲಿಮೆಂಟನ್ನು ಜಾರಿಗೆ ತಂದು ಉತ್ತಮ ಆಡಳಿತ ಕೊಟ್ಟವರು. ಕಸಬು ಆಧಾರಿತ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಅಸ್ಪೃಶ್ಯತೆಯ ತೊಡಗಿಸಲು ಹೋರಾಡಿದ ಪ್ರಮುಖರಲ್ಲಿ ಒಬ್ಬರು. ಹಾಗಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದ್ದು, ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಸಪ್ತಶ್ರೀರವರು ಬಸವಣ್ಣನವರ ಆದರ್ಶ ನಮಗೆ ದಾರಿದೀಪವಾಗಿದೆ. ಇಷ್ಟ ಲಿಂಗ ಪೂಜೆಗೆ ಆದ್ಯತೆ ನೀಡಿ ಸಾಮಾಜಿಕ ಸುಧಾರಣೆಗೆ ಹೋರಾಡಿದ ಮಹನೀಯರಲ್ಲಿ ಬಸವಣ್ಣನವರು ಪ್ರಮುಖರು. ಅವರ ಆದರ್ಶಗಳನ್ನ ನಾವು ಮೈಗೂಡಿಸಿಕೊಳ್ಳಬೇಕು. ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅನುಭವ ಮಂಟಪದ ಮೂಲಕ ವಿಶ್ವದ ಪ್ರಥಮ ಪಾರ್ಲಿಮೆಂಟನ್ನು ರೂಪಿಸಿದ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಹೋರಾಡಿದ ಮಹನೀಯರು. ಸಮಾಜದ ಸುಧಾರಣೆಗೆ ಹೋರಾಡಿದ ಪ್ರಮುಖರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಮೋಹನ್ ಕುಮಾರ್, ಇಟೊಓ ಸುದರ್ಶನ್, ನಗರಸಭಾ ಆಯುಕ್ತ ವಿಶ್ವೇಶ್ವರ ಬಗರಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಉಪ ತಹಸೀಲ್ದಾರ್ ಜಗನ್ನಾಥ್ ಮತ್ತು ತಾಲೂಕು ಅಧಿಕಾರಿಗಳು ಸಮಾಜದ ಮುಖಂಡರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.