ಕನ್ನಡಪ್ರಭ ವಾರ್ತೆ ಸವದತ್ತಿ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರು ಮಾಡಿರುವ ಮಹಾತ್ಕಾರ್ಯಗಳು ಸೂರ್ಯ ಚಂದ್ರರು ಇರುವವರೆಗೂ ನಿರಂತರವಾಗಿ ನೆರವೇರಿಕೊಂಡು ಹೋಗುತ್ತಿವೆ. ಲಿಂಗರಾಜ ದೇಸಾಯಿಯವರು ಹಚ್ಚಿದ ಜ್ಯೋತಿ ಇಂದು ಬಹಳಷ್ಟು ಜನರಿಗೆ ಬೆಳಕು ನೀಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರು ಮಾಡಿರುವ ಮಹಾತ್ಕಾರ್ಯಗಳು ಸೂರ್ಯ ಚಂದ್ರರು ಇರುವವರೆಗೂ ನಿರಂತರವಾಗಿ ನೆರವೇರಿಕೊಂಡು ಹೋಗುತ್ತಿವೆ. ಲಿಂಗರಾಜ ದೇಸಾಯಿಯವರು ಹಚ್ಚಿದ ಜ್ಯೋತಿ ಇಂದು ಬಹಳಷ್ಟು ಜನರಿಗೆ ಬೆಳಕು ನೀಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಪಟ್ಟಣದ ಉಮಾಚಂದ್ರ ಮಂಗಲ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ವೀರಶೈವ-ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ೧೬೫ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಅವರು ನೀಡಿದಂತ ಕೊಡುಗೆಗಳು ಇಂದು ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ದಾರಿ ದೀಪವಾಗಿದೆ ಎಂದು ಸ್ಮರಿಸಿದರು.

ಶಾಸಕ ವಿಶ್ವಾಸ ವೈದ್ಯ ಹಾಗೂ ಎನ್.ಎಚ್.ಕೋನರಡ್ಡಿ ಮಾತನಾಡಿ, ಸಮಾಜದ ಜನರ ಹಿತಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ನಡೆಯಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಡಿಗೆ ಕೂಡು ಒಕ್ಕಲಿಗರ ಕೊಡುಗೆ ಅಪಾರವಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಲಿಂಗರಾಜರ ವಿಚಾರಧಾರೆಗಳು ಇಂದು ಮಾದರಿಯಾಗಿವೆ ಎಂದರು.ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಮಹಾಸ್ವಾಮೀಜಿ ಹಾಗೂ ಧಾರವಾಡ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿರುಪಾಕ್ಷ ಮಾಮನಿ, ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮೌನೇಶ್ವರ ಸುಳ್ಳದ, ಡಾ.ಅನೀಲ ಮರಲಿಂಗಣ್ಣವರ, ಅಖಿಲ ಭಾರತೀಯ ಲಿಂಗಾಯತ ಕೂಡ ಒಕ್ಕಲಿಗ ಮಹಾಸಭಾ ಮತ್ತು ಲಿಂಗರಾಜ ವಿವಿಧೋದ್ದೇಶಗಳ ಸಂಸ್ಥೆ, ಲಿಂಗರಾಜ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸವದತ್ತಿ, ಭಾರತಿನಗರ ಧಾರವಾಡ ಅಖಿಲ ಕರ್ನಾಟಕ ಕುಡ ವಕ್ಕಲಿಗರ ಸಂಘ, ಗದಗ, ಚಿತ್ರದುರ್ಗ, ಕೊಪ್ಪಳ, ವಿಜಯನಗರ, ಹೂವಿನಹಡಗಲಿ, ಬಾಗಲಕೋಟ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿ.ವಿ.ಪಾಟೀಲ ಸ್ವಾಗತಿಸಿದರು. ವಿ.ಎಸ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.