ಕನ್ನಡಪ್ರಭ ವಾರ್ತೆ ಗೋಕಾಕ

ದೇಶದಲ್ಲಿ ಅತ್ಯಂತ ದೊಡ್ಡ ಆಸ್ಪತ್ರೆಯಾಗಿ ಕೆಎಲ್‌ಇ ಬೆಳೆದು ನಿಂತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಆರೋಗ್ಯವಂತರಾಗಲಿ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನ್ನವಳ್ಳಿ ಹೇಳಿದರು.

ಘೋಡಗೇರಿಯ ಶಿವಾನಂದ ಮಠದಲ್ಲಿ ಕೆಎಲ್‌ಇ ಆಸ್ಪತ್ರೆ ಐಸಿಯು ಗೋಕಾಕ ಹಾಗೂ ಮಲ್ಲಯ್ಯ ಮಹಾಸ್ವಾಮಿಗಳು ಘೋಡಗೇರಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಶಿಬಿರದಲ್ಲಿ ಅವರು ಮಾತನಾಡಿದರು. ಆರೋಗ್ಯ ಸೇವೆ ಇಂದು ದೇಶದಲ್ಲಿ ದೊಡ್ಡ ವ್ಯಾಪಾರವಾಗಿದ್ದು, ಇದು ದುಃಖದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೆಎಲ್‌ಇ ಆಸ್ಪತ್ರೆ ಬಡವರ ಪರವಾಗಿ ನಿಂತು ಕಾರ್ಯನಿರ್ವಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಕೆಎಲ್‌ಇ ಸಂಸ್ಥೆ ಹಣ ಮಾಡಲು ಹುಟ್ಟಿಲ್ಲ, ಜನರ ಸೇವೆ ಮಾಡಲು ಹುಟ್ಟಿದೆ. ಆಧುನಿಕ ಯುಗದಲ್ಲಿ ಪರಿಸರ ಹಾಳಾಗುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರು ಕಾಳಜಿ ವಹಿಸಿ ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕು, ಅಂದಾಗ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ, ಇಂದು ಆರೋಗ್ಯ ಸೇವೆಗಳು ದುಬಾರಿಯಾಗಿದ್ದು, ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದು ಆರೋಗ್ಯವಂತರಾಗಬೇಕು. ಕೆಎಲ್‌ಇ ಗೋಕಾಕ ಆಸ್ಪತ್ರೆಯಲ್ಲಿ ಅನುಭವಿ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದು, ಸೇವೆಯನ್ನು ಈ ಭಾಗದ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಧರೆಪ್ಪ ಚೌಗಲಾ, ಡಾ.ಶುಭಂ ಹುಕ್ಕೇರಿ, ಡಾ.ಅರುಣ ವಣ್ಣೂರ, ಡಾ.ಜ್ಯೋತಿ ಚೌಗಲಾ, ಡಾ.ಅಂಜನಾಬಾಯಿ ಓಸೇಕರ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.