ಲಿಂಗಾಯತ ಮಹಾಸಭಾ ಗೊಂದಲ ಸೃಷ್ಟಿಸಿದೆ: ವಚನಾನಂದ ಸ್ವಾಮೀಜಿ

| Published : Sep 19 2025, 01:00 AM IST

ಸಾರಾಂಶ

ಜಾತಿ ಸಮೀಕ್ಷೆ ಬಗ್ಗೆ 16 ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಮ್ಮಲ್ಲಿ 1,561 ಜಾತಿ ಪಟ್ಟಿ ಇದೆ. ಎರಡು ಕಡೆ ನಮ್ಮ ಜಾತಿ ಹೆಸರು ಬಂದಿದೆ. ಒಂದು ಕಡೆ ವೀರಶೈವ ಲಿಂಗಾಯತ, ಪಂಚಮಶಾಲಿ ಲಿಂಗಾಯತ ಅಂತ ಇದೆ. ಧರ್ಮದ ಕಾಲಂ ಹಿಂದೂ, ಜಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದು ಮಾಡುವಂತೆ ಮನವಿ ಮಾಡಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಲಿಂಗಾಯತ ಧರ್ಮ ಅಂತ ಬರೆಯಿರಿ ಎಂದು ಮಹಾಸಭಾ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಧರ್ಮದ ಮಾನ್ಯತೆ ಸಿಕ್ಕ ನಂತರ ಧರ್ಮ ಎಂದು ಬರೆಸೋಣ ಎಂದು ವಚನಾನಂದ ಸ್ವಾಮೀಜಿ ಕಿವಿಮಾತು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣತಿ ವೇಳೆ ಉಪ ಜಾತಿಯ ಹೆಸರು ನಮೂದು ಮಾಡುವ ಅಗತ್ಯ ಇಲ್ಲ. ಲಿಂಗಾಯತ ಮಹಾಸಭಾ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಲಿಂಗಾಯತ ಧರ್ಮ ಅಂತ ಬರೆಯಿಸಿ ಎಂದಿದೆ, ಅದು ಸರಿ‌ಯಿಲ್ಲ. ಧರ್ಮದ ಮಾನ್ಯತೆ ಸಿಕ್ಕ ನಂತರ ಅದನ್ನು ನಾವು ಮಾಡೋಣ ಎಂದರು.

ಜಾತಿ ಸಮೀಕ್ಷೆ ಬಗ್ಗೆ 16 ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಮ್ಮಲ್ಲಿ 1,561 ಜಾತಿ ಪಟ್ಟಿ ಇದೆ. ಎರಡು ಕಡೆ ನಮ್ಮ ಜಾತಿ ಹೆಸರು ಬಂದಿದೆ. ಒಂದು ಕಡೆ ವೀರಶೈವ ಲಿಂಗಾಯತ, ಪಂಚಮಶಾಲಿ ಲಿಂಗಾಯತ ಅಂತ ಇದೆ. ಧರ್ಮದ ಕಾಲಂ ಹಿಂದೂ, ಜಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದು ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.

ಜಾತಿ ಗಣತಿಗೆ ನನ್ನ ಸಂಪೂರ್ಣ ವಿರೋಧ ಇದೆ‌:

ತರಾತುರಿಯಲ್ಲಿ ಜಾತಿ ಗಣತಿ ಮಾಡುವ ಅಗತ್ಯ ಇರಲಿಲ್ಲ. ಈ ಸಂಬಂಧ ಕಾನೂನು ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಜಾತಿಗಳಿಗೆ ಕ್ರಿಶ್ಚಿಯನ್ ಹೆಸರು ಸೇರಿಸುತ್ತಿರುವುದು ಸರಿಯಲ್ಲ. ಇದರ ಹಿಂದೆ ಹಿಂದೂ ಧರ್ಮವನ್ನು ಹೊಡೆಯುವ ಹುನ್ನಾರ ಇದೆ‌. ಹಿಂದೂಗಳ ಸಂಖ್ಯೆ ಕಡಿಮೆ ತೋರಿಸುವುದು ಇದರ ಹಿಂದಿನ ಉದ್ದೇಶ. ಈ ಸಂಬಂಧ ಸದ್ಯದಲ್ಲೇ ಹೋರಾಟ ರೂಪುರೇಷೆ ಸಿದ್ಧಪಡಿಸುವುದಾಗಿ ತಿಳಿಸಿದರು.

ಧರ್ಮಸ್ಥಳ ಪ್ರಕರಣದ ಹಿಂದೆ ಬೇರೆ ಬೇರೆ ಧರ್ಮದವರ ಷಡ್ಯಂತರ ಇದೆ. ವಿದೇಶದಿಂದ ಹಣ ಹೂಡಿಕೆ ಆಗುತ್ತಿದೆ. ಮುಲ್ಲಾ ಸಮೀರನಿಗೂ ಧರ್ಮಸ್ಥಳಕ್ಕೂ ಏನು ಸಂಬಂಧ?. ಆತ ಧರ್ಮಸ್ಥಳಕ್ಕೆ ಕಾಣಿಕೆ ನೀಡಿದ್ದನಾ? ಅನಗತ್ಯವಾಗಿ ಮಾತನಾಡಿ ಈಗ ಬೀದಿಗೆ ಬಿದ್ದಿದ್ದಾನೆ. ಧರ್ಮಸ್ಥಳದ ಮಂಜುನಾಥ ಆತನಿಗೆ ಸರಿಯಾಗಿ ಶಿಕ್ಷೆ ಕೊಟ್ಟಿದ್ದಾನೆ. ಧರ್ಮವನ್ನು ಕೆಣಕಿದ ಯಾರಿಗೂ ಉಳಿಗಾಲವಿಲ್ಲ ಎಂದರು.

ಧರ್ಮಸ್ಥಳ ಅತ್ಯಂತ ಪವಿತ್ರ ಕ್ಷೇತ್ರ. ಸತ್ಯದ ಆಣೆ ಪ್ರಮಾಣ ಮಾಡಲು ಅಲ್ಲಿಗೆ ಬರುತ್ತಾರೆ. ಖುದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದು ಷಡ್ಯಂತರ ಅಂತ ಹೇಳಿದ್ದಾರೆ. ವಿದೇಶಿ ಟಿವಿ ಮಾಧ್ಯಮಗಳಲ್ಲಿಯೂ ಧರ್ಮಸ್ಥಳದ ಅಪಪ್ರಚಾರ ನಡೆದಿದೆ. ಅಲ್ಲಿ ಏನೂ ಸಿಕ್ಕಿಲ್ಲ ಎಂಬುದನ್ನು ಅವರು ತೋರಿಸುತ್ತಾರಾ? ಇನ್ನು ಎಸ್‌.ಐ.ಟಿ ತನಿಖೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.