ಲೋಕಸಭೆ ಮತ ಎಣಿಕೆ: ಪೂರ್ವ ಸಿದ್ಧತೆ ಮಾಡಿಕೊಳ್ಳಿ

| Published : May 28 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೂನ್‌ 4 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಮತ ಎಣಿಕೆಗೆ ಸಿದ್ಧವಾಗಿದೆ. ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ, ನಿಯಮಗಳನ್ನು ಪಾಲಿಸುವ ಮೂಲಕ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೂನ್‌ 4 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಮತ ಎಣಿಕೆಗೆ ಸಿದ್ಧವಾಗಿದೆ. ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ, ನಿಯಮಗಳನ್ನು ಪಾಲಿಸುವ ಮೂಲಕ ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಸೋಮವಾರ ಲೋಕಸಭಾ ಚುನಾವಣೆ - ೨೦೨೪ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ಸೂಚನೆ ನೀಡಿದರು. ಮತ ಎಣಿಕೆ ಪ್ರಕ್ರಿಯೆ ಜೂ.4ರಂದು ವಿಜಯಪುರ ಸೈನಿಕ ಶಾಲೆಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ ೮ ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದ್ದು, ಮತ ಎಣಿಕೆ ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆಯುವ ಮೂಲಕ ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ಮಾಸ್ಟರ್ ಟ್ರೇನರ್ ಅಶೋಕ ಲಿಮ್ಕಾರ ಅವರು, ತರಬೇತಿಗೆ ಆಗಮಿಸಿದ ಸಿಬ್ಬಂದಿಗೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನುಸರಿಸಬಹುದಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ ಶಂಕರಗೌಡ ಸೋಮನಾಳ ಅವರು, ತರಬೇತಿಗೆ ಆಗಮಿಸಿದ ಸಿಬ್ಬಂದಿಗೆ ಮತ ಎಣಿಕೆಯ ಪ್ರಕ್ರಿಯೆಗಳ ಬಗ್ಗೆ ಇವಿಎಂ ಮಶಿನ್ ಹಾಗೂ ವಿವಿಪ್ಯಾಟ್‌ಗಳ ಕಾರ್ಯ ವೈಖರಿ ಹಾಗೂ ಅದನ್ನು ಬಳಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ವಿವಿಪ್ಯಾಟ್‌ ಮಾದರಿ ಮತ ಎಣಿಕೆ ಪ್ರಾತ್ಯಕ್ಷಿಕೆ ಪರೀಕ್ಷಿಸಿದ ಡಿಸಿ: ಲೋಕಸಭಾ ಚುನಾವಣೆ - ೨೦೨೪ರ ಮತಎಣಿಕೆ ಪೂರ್ವಸಿದ್ಧತೆ ತರಬೇತಿಯಲ್ಲಿ ಸ್ವತಃ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾದರಿ ವಿವಿಪ್ಯಾಟ್ ನ್ನು ವಿಕ್ಷೀಸಿ ಮತ ಎಣಿಕೆಯ ವಿಧಾನಗಳ ಹಂತಗಳನ್ನು ಪರಿಶೀಲನೆ ಮಾಡಿದರು.

----------

ಬಾಕ್ಸ್‌

ಸಿಬ್ಬಂದಿಗೆ ಡಿಸಿ ನಿರ್ದೇಶನ

ಮತ ಎಣಿಕೆ ಪ್ರಾರಂಭವಾಗುವ ಮೊದಲು ವಿವಿಪ್ಯಾಟ್ ಆನ್ ಮಾಡುವುದು, ರಿಸಲ್ಟ್ ಬಟನ್ ಪ್ರೆಸ್ ಮಾಡುವುದು ಹಾಗೂ ಅದನ್ನು ಕ್ಲೋಸ್ ಮಾಡುವಾಗ ಬಹು ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಗೆ ಸಂಬಂಧಿಸಿದಂತೆ ನಿಯೋಜನೆಗೊಂಡ ಏಜೆಂಟರ ಬಳಿ ಶಾಂತವಾಗಿ ವರ್ತಿಸಬೇಕು. ಅವರಿಗೆ ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಪರಿಹರಿಸಬೇಕು. ಪ್ರತಿ ಇವಿಎಂ ಮಷಿನ್‌ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು. ಈ ಉದ್ದೇಶದಿಂದಲೇ ಇಂದಿನ ತರಬೇತಿ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಿ, ಕಾರಣ ಮತ ಎಣಿಕೆ ಮೇಲ್ವೀಚಾರಕರ ಜವಾಬ್ದಾರಿ ಬಹು ಮುಖ್ಯವಾಗಿರುತ್ತದೆ ಎಂದು ನಿರ್ದೇಶನ ನೀಡಿದರು.

--------------------------

ಕೋಟ್‌

ಮತ ಎಣಿಕೆ ದಿನ ಬೆಳಗ್ಗೆ ೭ ಗಂಟೆಯೊಳಗೆ ಸಿಬ್ಬಂದಿಗೆ ನಿಗದಿ ಪಡಿಸಿದ ಮತ ಎಣಿಕೆ ಹಾಲ್‌ನಲ್ಲಿ ಎಲ್ಲರೂ ಹಾಜರಿರಬೇಕು. ಮತ ಎಣಿಕೆ ಹಾಲ್ ಒಳಗಡೆ ಮೊಬೈಲ್ ನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಹಾಲ್ ಒಳಗಡೆ ಪೊಲೀಸ್, ಸೆಕ್ಯುರಿಟಿ ಸಿಬ್ಬಂದಿಗೆ ಅನಾವಶ್ಯಕವಾಗಿ ಪ್ರವೇಶವಿರುವುದಿಲ್ಲ. ಅಭ್ಯರ್ಥಿಗಳಲ್ಲದ ಸಚಿವರು, ರಾಜ್ಯ ಸಚಿವರು, ಕೇಂದ್ರ ಸಚಿವರಿಗೆ ಮತ ಎಣಿಕೆ ಹಾಲ್ ಒಳಗಡೆ ಯಾವುದೇ ರೀತಿಯ ಪ್ರವೇಶ ಇರುವುದಿಲ್ಲ. ಈ ಕುರಿತು ಸಿಬ್ಬಂದಿಗೆ ತಿಳಿದಿರಲಿ.

- ಟಿ.ಭೂಬಾಲನ್‌, ಜಿಲ್ಲಾ ಚುನಾವಣಾಧಿಕಾರಿ.