ಸಾರಾಂಶ
ಕಲಾವಿದರು ನಾಟಕ ಮಾಡುವಾಗ ಯಾವುದೇ ಕಾರಣಕ್ಕೂ ಸಣ್ಣ ಪಾತ್ರ, ದೊಡ್ಡ ಪಾತ್ರ ಎಂಬ ತಾತ್ಸರವನ್ನು ಬೆಳೆಸಿಕೊಳ್ಳದೆ, ಎಲ್ಲಾ ಪಾತ್ರಕ್ಕೂ ಸರಿಯಾದ ನ್ಯಾಯ ಒದಗಿಸಿಕೊಡಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ರಂಗಭೂಮಿ ಜೀವನದಲ್ಲಿ ಶಿಸ್ತನ್ನು ಬೆಳೆಸುತ್ತದೆ. ಜೊತೆಗೆ ನಮ್ಮನ್ನು ನಾವು ಅರಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ರಂಗಾಯಣದ ಹಿರಿಯ ಕಲಾವಿದೆ . ಗೀತಾ ಮೊಂಟಡ್ಕ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ರಂಗತಂಡ (ಸಾರಂತ)ದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಭೂಮಿಯನ್ನು ಆಸಕ್ತಿಯಾಗಿ ಬೆಳೆಸಿಕೊಂಡು ವಿದ್ಯಾರ್ಥಿಗಳು ತಮ್ಮ ಒಟ್ಟಾರೆ ಅಭಿವೃದ್ಧಿಯ ಕಡೆ ಗಮನಹರಿಸಬೇಕು. ಹಾಗೂ ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಲಾವಿದರು ನಾಟಕ ಮಾಡುವಾಗ ಯಾವುದೇ ಕಾರಣಕ್ಕೂ ಸಣ್ಣ ಪಾತ್ರ, ದೊಡ್ಡ ಪಾತ್ರ ಎಂಬ ತಾತ್ಸರವನ್ನು ಬೆಳೆಸಿಕೊಳ್ಳದೆ, ಎಲ್ಲಾ ಪಾತ್ರಕ್ಕೂ ಸರಿಯಾದ ನ್ಯಾಯ ಒದಗಿಸಿಕೊಡಬೇಕು. ಹಾಗಿದ್ದಲ್ಲಿ ನಾವು ಯಶಸ್ಸು ಪಡೆಯಲಿಕ್ಕೆ ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ರಂಗಭೂಮಿ ನಮ್ಮನ್ನು ನಾವು ಅರಿಯುವುದರಲ್ಲಿ ಹೆಚ್ಚಿನ ಪಾಲು ವಹಿಸುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಂಗಾಯಣ ಹಾಗೂ ಕಲಾಮಂದಿರಗಳಲ್ಲಿ ಬಹಳಷ್ಟು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಅವರನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳೆಂದು ಹೇಳುವುದಕ್ಕೆ ನಮಗೆ ಬಹಳ ಸಂತೋಷವಾಗುತ್ತದೆ. ಹಾಗೆಯೇ ನಮ್ಮ ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆ ಧ್ಯೇಯವನ್ನಿಟ್ಟುಕೊಂಡು ಯಶಸ್ಸು ಕಾಣಲಿ ಎಂದು ಹಾರೈಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಐಕ್ಯೂಎಸಿ ಸಂಚಾಲಕಿ ಡಿ. ಗೀತಾ, ಸಾರಂತ ಸಂಚಾಲಕರಾದ ಎ. ರಾಧೇಶ್, ವಿ. ಸುಭಾಷಿಣಿ ಮೊದಲಾದವರು ಇದ್ದರು.