ಸಾರಾಂಶ
ಲಿಂಗಸುಗೂರಿನ ರೋಡಲಬಂಡಾ (ಯುಕೆಪಿ ಕ್ಯಾಂಪ್)ನಲ್ಲಿನ ಸರ್ಕಾರಿ ಕಚೇರಿ, ವಸತಿ ಗೃಹಗಳ ನಿರ್ವಹಣೆ ಅನುದಾನ ದುರ್ಬಳಕೆ ಆಗಿರುವ ಹಿನ್ನೆಲೆ ಸೂಕ್ತ ಕ್ರಮ ವಹಿಸಬೇಕೆಂದು ರೈತ ಸಂಘದಿಂದ ಮುಖ್ಯ ಎಂಜಿಯರ್ಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ತಾಲೂಕಿನ ರೋಡಲಬಂಡಾ (ಯುಕೆಪಿ ಕ್ಯಾಂಪ್)ನಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ವಸತಿ ಗೃಹಗಳ ನಿರ್ವಹಣೆಯಲ್ಲಿ ಅವ್ಯವಹಾರ ಆಗಿದ್ದು ಕೂಡಲೇ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಾರಾಯಣಪುರದಲ್ಲಿ ಇರುವ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ಗೆ ರಾಜ್ಯ ರೈತ ಸಂಘದವರು ಮನವಿ ಸಲ್ಲಿಸಿದರು.ಹಲವು ದಶಕಗಳಿಂದ ರೋಡಲಬಂಡಾ (ಯುಕೆಪಿ ಕ್ಯಾಂಪ್)ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಕಚೇರಿಗಳು ಹಾಗೂ ಅಧಿಕಾರಿ, ಎಂಜಿನಿಯರ್ ಹಾಗೂ ಸಿಬ್ಬಂದಿಗೆ ವಸತಿ ಗೃಹಗಳು ಇವೆ. 2018-19 ಸಾಲಿನಲ್ಲಿ ಸರ್ಕಾರಿ ಕಚೇರಿ ಮತ್ತು ವಸತಿ ಗೃಹಗಳಿಗೆ ಬೀದಿ ದೀಪ ಅಳವಡಿಸಲು ಯೋಜನೆ ರೂಪಿಸಿತ್ತು. ಯೋಜನೆಯಂತೆ ಕಾಮಗಾರಿ ಕೈಗೊಳ್ಳದೆ ಕಳಪೆ ಮಟ್ಟದ ಸಾಮಾಗ್ರಿಗಳ ಅಳವಡಿಸಿದ್ದಾರೆ. ಅಲ್ಲದೇ ನಿರ್ವಹಣೆ ಬಂದ ಅನುದಾನವು ದುರ್ಬಳಕೆಯಾಗಿದೆ. ಇಲ್ಲಿಂದ ಬೇರೆಡೆ ವರ್ಗಾವಣೆಯಾದರೂ ಅಂತಹ ಅಧಿಕಾರಿ, ಎಂಜಿನಿಯರ್, ಸಿಬ್ಬಂದಿ ಇಲ್ಲಯೇ ಠಿಕಾಣಿ ಹೂಡಿದ್ದಾರೆ.
ಕೂಡಲೇ ಸರ್ಕಾರಿ ಕಚೇರಿ, ವಸತಿ ಗೃಹಗಳ ನಿರ್ವಹಣೆಯಲ್ಲಿ ಅನುದಾನ ದುರ್ಬಳಕೆ ಆಗಿದ್ದು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಪ್ರಧಾಯ ಕಾರ್ಯದರ್ಶಿ ಸದಾನಂದ ಮಡಿವಾಳ, ಕಾರ್ಯದರ್ಶಿ ಪ್ರಸಾದರೆಡ್ಡಿ ಸೇರಿದಂತೆ ರೈತರು ಆಗ್ರಹಿಸಿದ್ದಾರೆ.