ಸಾರಾಂಶ
- ₹ 25 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಕನ್ನಡಪ್ರಭ ವಾರ್ತೆ ಸಿಂಧನೂರು
ತನ್ನ ಪ್ರೇಯಸಿದೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಸಂಶಯಪಟ್ಟು ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಮತ್ತು ರು.25 ಸಾವಿರ ದಂಡ ವಿಧಿಸಿ ಸ್ಥಳೀಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜು.9ರಂದು ಆದೇಶ ಹೊರಡಿಸಿದೆ.ತಾಲ್ಲೂಕಿನ ಜವಳಗೇರಾ ಗ್ರಾಮದ ಜಗದೀಶ ಈರಣ್ಣ ಮತ್ತು ಮಸ್ಕಿ ತಾಲ್ಲೂಕಿನ ತಲೇಖಾನ್ ಗ್ರಾಮದ ಬಸವರಾಜ ಇಬ್ಬರೂ ಭತ್ತದ ರಾಶಿ ಮಷಿನ್ ಆಪರೇಟರ್ಗಳಾಗಿದ್ದು, ಪರಸ್ಪರ ಪರಿಚಯಸ್ಥರು.
ತಲೇಖಾನ್ ಗ್ರಾಮದ ಮಹಿಳೆಯೊಂದಿಗೆ ಆರೋಪಿ ಜಗದೀಶ ಅನೈತಿಕ ಸಂಬಂಧ ಹೊಂದಿದ್ದನು. ಪರಿಶಿಷ್ಟ ಪಂಗಡದ ಮೃತ ಬಸವರಾಜ ತನ್ನ ಪ್ರೇಯಸಿ ಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಸಂಶಯದಿಂದ ಮೇ 8, 2022 ರಂದು ಆರೋಪಿ ಜಗದೀಶ ತಲೇಖಾನ್ ಗ್ರಾಮದ ಬಸವರಾಜ ಎಂಬಾತನ ಕುತ್ತಿಗೆ, ತಲೆಭಾಗವನ್ನು ರೇಜರ್ ಬ್ಲೇಡಿನಿಂದ ಕೊಯ್ದು ಕೊಲೆಗೈದಿದ್ದಾನೆ.ಹತ್ಯೆಯಾದ ಬಸವರಾಜ ಸಿಂಧನೂರು ತಾಲ್ಲೂಕಿನ ದಿದ್ದಗಿ ಗ್ರಾಮದಿಂದ ತನ್ನ ಪರಿಚಯಸ್ಥರಿಂದ ಹಣ ತರಲು ಆರೋಪಿ ಜಗದೀಶನನ್ನು ತನ್ನೊಂದಿಗೆ ಬೈಕ್ ಹಿಂದೆ ಕುಳ್ಳಿರಿಸಿಕೊಂಡು ಹೋಗಿರುತ್ತಾನೆ. ದಾರಿ ಮಧ್ಯೆ ಕುಡಿಯುವ ನೀರಿಗೋಸ್ಕರ ಹಳ್ಳದಿಂದ ಬಾಟಲಿಯಲ್ಲಿ ನೀರು ತರಲು ಮೃತ ಬಸವರಾಜ ಹೊರಟ ಸಮಯದಲ್ಲಿ ಜಗದೀಶ ಹಿಂದಿನಿಂದ ರೇಜರ್ ಬ್ಲೇಡಿನಿಂದ ಬಲವಾಗಿ ಕುತ್ತಿಗೆ ಕೊಯ್ದಿದ್ದರಿಂದ ರಕ್ತಸ್ತಾವವಾಗಿ ಬಸವರಾಜ ಮೂರ್ಛೆ ತಪ್ಪಿ ಬಿದ್ದು ಪ್ರಾಣಬಿಡುತ್ತಾನೆ. ಸಾಕ್ಷಿ ನಾಶ ಪಡಿಸುವ ಉದ್ಧೇಶದಿಂದ ಜಗದೀಶ ಅದೇ ವಾಹನದಿಂದ ಪೆಟ್ರೋಲ್ ತೆಗೆದು ಮೃತದೇಹವನ್ನು ಸುಟ್ಟು ಪರಾರಿ ಯಾಗಿದ್ದನು.
ಬಳಗಾನೂರಿನಲ್ಲಿ ಠಾಣೆಯಲ್ಲಿ ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಕಾಯ್ದೆಯಡಿ ಮತ್ತು ಕೊಲೆ ಪ್ರಕರಣ ದಾಖಲಾಗಿರುತ್ತದೆ. ನಂತರ ಡಿವೈಎಸ್ಪಿ ವೆಂಕಟಪ್ಪ ನಾಯಕ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ಬುಧವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ರೂ.25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಎ.ಗಡ್ಕರಿ ವಾದ ಮಂಡಿಸಿದ್ದರು. ಪೊಲೀಸ್ ಕಾನ್ಸಟೆಬಲ್ ಸೂಕ್ತ ಸಮಯದಲ್ಲಿ ಸಾಕ್ಷಿದಾರರನ್ನು ಹಾಜರು ಪಡಿಸಿದ್ದಾರೆಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.