ಕನ್ನಡಪ್ರಭ ವಾರ್ತೆ ಮಂಡ್ಯ

ಬೆಳೆದು ನಿಂತಿರುವ ಬೆಳೆಗೆ ಒಂದು ಕಟ್ಟು ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಏಕೀಕರಣ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ವೃತ್ತದಲ್ಲಿ ಸೇರಿದ ರೈತಸಂಘದ ಕಾರ್ಯಕರ್ತರು ರಸ್ತೆಯಲ್ಲೇ ಮುದ್ದೆ, ಹುರುಳಿ ಉಪ್ಸಾರು ಸೇವಿಸಿದರು. ಅಣೆಕಟ್ಟೆಯಲ್ಲಿ 80 ಅಡಿ ನೀರಿರುವುದರಿಂದ ಒಂದು ಕಟ್ಟು ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್ ಮಾತನಾಡಿ, ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಬ್ಬು ಹಾಗೂ ಇತರೆ ಬೆಳೆಗಳು ಬೆಳೆದು ನಿಂತಿವೆ. ಮಳೆ ಕೈಕೊಟ್ಟಿದೆ. ನಾಲೆಗಳಲ್ಲೂ ನೀರು ಹರಿಯುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಾಲೆಗಳಿಗೆ ಒಂದು ಕಟ್ಟು ನೀರು ಹರಿಸಿದರೆ ಒಣಗುತ್ತಿರುವ ಬೆಳೆಗಳು ಉಳಿದುಕೊಳ್ಳುತ್ತವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯ ಫಸಲು ಕೈಸೇರುತ್ತದೆ ಎಂದು ಹೇಳಿದರು.

ಈ ಬಗ್ಗೆ ಜಿಲ್ಲೆಯ ಶಾಸಕರು, ಸಚಿವರು ಮತ್ತು ಸಂಸದರು ಗಮನಹರಿಸಿ, ಸರ್ಕಾರದ ಮೇಲೆ ಒತ್ತಡ ಹೇರಿ ನಾಲೆಗಳಿಗೆ ನೀರು ಬಿಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಪರ್ಯಾಯ ಬೆಳೆ ಬೆಳೆಯಿರಿ ಎನ್ನುವ ಮುಖ್ಯಮಂತ್ರಿಗೆ ಕೃಷಿ ಬಗ್ಗೆ ತಿಳಿವಳಿಕೆ ಇಲ್ಲ. ಮಳೆಯಾಶ್ರಿತ ಬೆಳೆ ಬೆಳೆಯಿರಿ ಎನ್ನುವ ಮುಖ್ಯಮಂತ್ರಿಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಬಿದ್ದರಷ್ಟೇ ಅಲ್ಲವೇ ಬಿತ್ತನೆ ಮಾಡುವುದು. ಮಳೆಯೇ ಬೀಳುತ್ತಿಲ್ಲ. ಮುಂದೆ ಮಳೆ ಬರುತ್ತದೆಂದು ನಂಬಿಕೊಂಡು ಹೇಗೆ ಬಿತ್ತನೆ ಮಾಡುವುದು? ಈಗ ಬಿದ್ದಿರುವ ಮಳೆಯಿಂದ ಬೆಳೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಮುಂಗಾರಿನ ಹಂಗಾಮಿನ ಬೆಳೆ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ನಾಗರಾಜು ಗಾಣದಾಳು, ಸುರೇಶ್ ಗೋಪಾಲಪುರ, ಬೂದನೂರು ಪುಟ್ಟಸ್ವಾಮಿ, ಜವರೇಗೌಡ, ಕೀಲಾರ ಸೋಮಶೇಖರ್, ನಾಗರಾಜು, ತನು, ನಿಂಗೇಗೌಡ ಭಾಗವಹಿಸಿದ್ದರು.