ಮಂಗಳೂರು: ಉತ್ತಮ ಕೃಷಿ ಪದ್ಧತಿಯ ಮೂಲಕ ಕೃಷಿಕರು ತಮ್ಮ ಬೆಳೆಯನ್ನು ರಫ್ತು ಮಾಡುವ ಅಗತ್ಯವಿದ್ದು, ಅದಕ್ಕೆ ಬೇಕಾದ ಮಾಹಿತಿಯನ್ನು ಹೊಂದಿರಬೇಕು. ಕೆಪೆಕ್ ಮೂಲಕ ರೈತರಿಗೆ ಸೂಕ್ತ ತರಬೇತಿ ನೀಡುವ ಕಾರ್ಯವಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್‌ ಹೇಳಿದ್ದಾರೆ.

ಅವರು ಗುರುವಾರ ಇಲ್ಲಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಕೆಪೆಕ್ ಸಂಸ್ಥೆ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ‘ಗುಣಮಟ್ಟ ಸುಧಾರಣೆ-ರಫ್ತು ಉತ್ತೇಜನೆ: ಕಾಳುಮೆಣಸು, ಗೇರು ಮತ್ತು ಕೋಕೋ ಬೆಳೆಗಳ ಉತ್ತಮ ಕೃಷಿ ಪದ್ಧತಿಗಳು ಮತ್ತು ಸಂಸ್ಕರಣೆ’ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೋಟಗಾರಿಕೆ, ಕೃಷಿ ಬೆಳೆಗಳನ್ನು ಹೆಚ್ಚು ಅಭಿವೃದ್ಧಿಗೊಳಿಸಲು ಸಾಕಷ್ಟು ಅವಕಾಶಗಳಿವೆ. ರೈತರು ತಮ್ಮ ಬೆಳೆಯನ್ನು ವಾಣಿಜ್ಯೋದ್ಯಮದ ರೀತಿಯಲ್ಲೂ ಕೂಡ ನೋಡಬೇಕಿದೆ. ವಾಣಿಜ್ಯ ಕಾರ್ಯಸಾಧ್ಯತೆಗಳಿಲ್ಲದೇ ಇದ್ದಲ್ಲಿ ರೈತರು ಆ ಬೆಳೆಯನ್ನು ಬೆಳೆಯಲು ಮುಂದಾಗುವುದಿಲ್ಲ. ಬೆಳೆದ ನಂತರ ಸಂಸ್ಕರಣೆ, ಪ್ಯಾಕೇಜಿಂಗ್ ಮಾಡುವುದು, ಅದರ ಬಳಕೆದಾರರ ಮಾಹಿತಿ ಸಂಗ್ರಹಿಸುವುದು, ಅವರನ್ನು ತಲುಪಲು ಮಾರ್ಗೋಪಾಯ ಕಂಡುಹಿಡಿಯಬೇಕಿದೆ. ನಮ್ಮ ರೈತರು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಮ್ಮ ಬೆಳೆ ತಲುಪಿಸುವ ಬಗ್ಗೆ ಪ್ರಯತ್ನಿಸಬೇಕು ಎಂದರು.

ಆರ್ಥಿಕತೆಗೆ ಕೆಪೆಕ್ ಕೊಡುಗೆ: ದ.ಕ. ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ ಕಾರ್ಭಾರಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಕೃಷಿ ಜಮೀನು ಅಧಿಕವಾಗಿದ್ದು, ತೋಟಗಾರಿಕೆ ಬೆಳೆಗಳೇ ಜಾಸ್ತಿ. ಅವುಗಳು ರೈತರಿಗೆ ಉತ್ತಮ ಆದಾಯ ಮೂಲಗಳಾಗಿವೆ. ಪಿಎಂಇಎಫ್ಎಂಇಯ ಮೂಲಕ ರೈತರಿಗೆ ಬೆಂಬಲ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ತರಬೇತಿ ಕಾರ್ಯಕ್ರಮದ ಮೂಲಕ ಯಾವ ರೀತಿ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಬಹುದು. ರಫ್ತಿಗೆ ಸಂಬಂಧಿಸಿದಂತೆ ಬೇಕಾದ ಕ್ರಮದ ಬಗ್ಗೆಯೂ ಮಾಹಿತಿ ನೀಡುತ್ತಿದ್ದು, ಎಲ್ಲರೂ ಅದರ ಪ್ರಯೋಜನ ಪಡೆದು ಉತ್ತಮ ಉದ್ಯಮವನ್ನು ನಡೆಸಿ ಆರ್ಥಿಕತೆಗೆ ಕೊಡುಗೆ ನೀಡಬೇಕು ಎಂದರು.ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ವಿ. ಕುಮಾರ್, ಲಕ್ಷಪತಿ ಎನ್. ನಾಯಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ಶಿವಕುಮಾರ್ ವಿವಿಧ ಮಾಹಿತಿ ಹಂಚಿಕೊಂಡರು.

ಅನುದಾನ ಸಮರ್ಪಕ ಬಳಸಿ: ಸಿ.ಎನ್‌.ಶಿವಪ್ರಕಾಶ್‌: ಕೆಪೆಕ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಸಿ. ಎನ್. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೇರು, ಕಾಳುಮೆಣಸು ಮತ್ತು ಕೋಕೋ ಬೆಳೆಗಳನ್ನು ಸಂಸ್ಕರಣೆ ಮಾಡಿ ಮೌಲ್ಯ ವರ್ಧನೆಯೊಂದಿಗೆ ಬೆಳೆಗಾರರಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಕೆಪೆಕ್ ಸಂಸ್ಥೆ ಕೃಷಿ ಸಚಿವರ ಮುಂದಾಳುತ್ವದಲ್ಲಿ ನಡೆಸಲಾಗುತ್ತಿದ್ದು, ಅದರ ಮೂಲಕ ಆಹಾರ ಸಂಸ್ಕರಣೆ ಹಾಗೂ ರಫ್ತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. 2020ರಲ್ಲಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಯೋಜನೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಆರಂಭಗೊಂಡಿದ್ದು, ಅದರ ಮೂಲಕ ಸಾವಿರಾರು ಕೋಟಿ ರು. ಅನುದಾನ ಲಭ್ಯವಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಆಹಾರ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು 15 ಲಕ್ಷ ರು. ವರೆಗೆ ಸಹಾಯಧನ ಪಡೆಯಬಹುದು. ಆಸಕ್ತರು ಕೃಷಿ ಇಲಾಖೆ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಜತೆ ಚರ್ಚಿಸಬೇಕು. ಬಳಿಕ ಯೋಜನಾ ವರದಿ, ದಾಖಲೆಗಳನ್ನು ಒದಗಿಸಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. 2024-25ರಲ್ಲಿ 206 ಕೋ. ರೂ. ಸಬ್ಸಿಡಿ ಪಾವತಿಸಲಾಗಿದೆ. ಪ್ರಸ್ತುತ 2 ಸಾವಿರ ಅರ್ಜಿಗಳು ರಾಜ್ಯದಲ್ಲಿ ವಿಲೇವಾರಿಯಾಗದೆ ಉಳಿದುಕೊಂಡಿದೆ. ಯೋಜನೆ ಪ್ರಸಿದ್ಧವಾಗಿರುವ ಕಾರಣ ನೊಂದಣಿ ಹೆಚ್ಚಳವಾಗುತ್ತಿದೆ. ಪ್ರತಿಯೊಬ್ಬರು ತಮಗೆ ಸಾಧ್ಯವಿರುವ ಉದ್ಯಮವನ್ನು ಆರಂಭಿಸಿ ಬೆಳೆಯಬೇಕು ಎಂಬುವುದು ಪ್ರಮುಖ ಗುರಿಯಾಗಿದೆ ಎಂದರು.