ಮಂಗಳೂರು: ಮಾತಾ ಅಮೃತಾನಂದಮಯಿ ದೇವಿಯವರು ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನ ಮಾತ್ರವೇ ಅಲ್ಲದೆ ಸಂಸ್ಕೃತಿ, ಶಿಕ್ಷಣ ಮತ್ತು ಜನಪರವಾದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಲ್ಲಿಸುತ್ತಿರುವ ಸೇವೆ ಒಂದು ಅತ್ಯುತ್ತಮ ಮಾದರಿಯಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮೇ 28 ಹಾಗೂ 29ರಂದು ಅಮ್ಮನವರ ಮಂಗಳೂರು ಭೇಟಿಯ ಸಂದರ್ಭದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಬೋಳೂರಿನಲ್ಲಿ ನಿರ್ಮಿಸಲಾದ 10 ಸ್ನಾನಗೃಹ ಮತ್ತು ಶೌಚಾಲಯಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತಾಡಿದರು.ಮಂಗಳೂರಿನ ಅಮ್ಮನವರ ಆಶ್ರಮ ಹಾಗೂ ದೇವಸ್ಥಾನಕ್ಕೆ ಮತ್ತು ಆಶ್ರಮದ ಸೇವಾ ಚಟುವಟಿಕೆಗಳ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಹಿಂದುಳಿದ ಈ ಪ್ರದೇಶದಲ್ಲಿ ಸೂಕ್ತವಾದ ಶೌಚಾಲಯ ವ್ಯವಸ್ಥೆ ಇಲ್ಲ. ಇದನ್ನು ಮನಗಂಡು ಸಾರ್ವಜನಿಕರ ಒತ್ತಾಯದ ಮೇರೆಗೆ ಜನರ ಉಪಯೋಗಕ್ಕಾಗಿ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಅವರು ಶಾಸಕರಿಗೆ ಗೌರವಾರ್ಪಣೆ ಮಾಡಿದರು. ಗುತ್ತಿಗೆದಾರ ಅಜಯ್ ಮತ್ತು ಉಸ್ತುವಾರಿ ಪ್ರಸನ್ನ ಅವರನ್ನು ಶಾಸಕರು ಸನ್ಮಾನಿಸಿದರು.ಸೇವಾ ಸಮಿತಿಯ ಗೌರವಾಧ್ಯಕ್ಷ ಡಾ. ವಸಂತಕುಮಾರ ಪೆರ್ಲ, ಕೋಶಾಧಿಕಾರಿ ಸಿಎ ರಾಮನಾಥ್ ನಾಯಕ್, ಮುಂಬಯಿ ಭಕ್ತಿ ಸಂಪದದ ಬಾಲಕೃಷ್ಣ ಕುಂದರ್, ಶಿವರಾಮ್ ಏನೆಕಲ್, ವಕೀಲರಾದ ಪುಷ್ಪಲತಾ ಗಟ್ಟಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಡಾ ಸುಚಿತ್ರಾ ರಾವ್, ಸೇವಾ ಸಮಿತಿಯ ಪದಾಧಿಕಾರಿಗಳಾದ ವಾಮನ್ ಮೈಂದನ್, ಗಣೇಶ್ ಕೆ‍, ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಮಧುಲಿಖಾ ರಾವ್, ಉಪ ಪ್ರಾಂಶುಪಾಲೆ ರೇಖಾ ಕಾಮತ್ , ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ಅಮ್ಮನ ಭಕ್ತರು ಭಾಗವಹಿಸಿದ್ದರು. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಡಾ. ದೇವದಾಸ ಪುತ್ರನ್ ನಿರ್ವಹಿಸಿದರು.