ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯದ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ಪಂಚಲಿಂಗದಲ್ಲಿ ಒಂದಾಗಿರುವ ಗುಣವಂತೇಶ್ವರನಿಗೆ ತನ್ನದೇ ಆದ ಮಹತ್ವವಿದೆ. ಗೋಕರ್ಣ ಮೂಲಕ್ಷೇತ್ರವಾದರೆ, ಮುರ್ಡೇಶ್ವರ ಅಘೋರವಾದ್ದು, ಗುಣವಂತೆ ಶಂಭುಲಿಂಗೇಶ್ವರ ವಾಮದೇವಾತ್ಮಕವಾದ ಲಿಂಗವಾಗಿದೆ. ಶಿವ ಇಲ್ಲಿ ಲೋಕಕಲ್ಯಾಣಕವಾದ ಶಕ್ತಿ ಹೊಂದಿದ್ದಾನೆ ಎಂದು ಹೊಸನಗರದ ರಾಘವೇಶ್ವರ ಸ್ವಾಮಿಗಳು ನುಡಿದರು.ತಾಲೂಕಿನ ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯದ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಐದನೇ ದಿನ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ದೇವಾಲಯ ಜೀರ್ಣಾವಸ್ಥೆಯಲ್ಲಿ ಇತ್ತು. ಇದಕ್ಕೆ ಕಾರಣ ಈಗಿನ ಕಾಲದಲ್ಲಿದ್ದವರು ಹೊಸ ದೇವಾಲಯ ನೋಡಲಿ ಎಂಬುದಾಗಿ. ಇದು ದೇವರದ್ದೆ ನಿರ್ಣಯವಾಗಿತ್ತು. ಧನವಂತರಲ್ಲಿ ಬೇಕಾದಷ್ಟು ಹಣವಿರುತ್ತದೆ. ಆದರೆ ಅದನ್ನು ಸದ್ವಿನಿಯೋಗ ಮಾಡುವ ಮನಸ್ಸಿರಬೇಕು. ಎಲ್ಲರಿಗೂ ದೇವಾಲಯ ಕಟ್ಟುವ ಯೋಗ ಇರುವುದಿಲ್ಲ. ಆರ್.ಎನ್. ಶೆಟ್ಟಿ ಮುರ್ಡೇಶ್ವರ ಕಟ್ಟಿದ್ರೆ, ಅವರ ಮಗ ಇದನ್ನ ನಿರ್ಮಿಸಿದ್ದಾರೆ. ವಾಸ್ತು ಪ್ರಕಾರವಾಗಿ, ಶಾಸ್ತ್ರದಲ್ಲಿ ಹೇಳಿರುವ ಪ್ರಕಾರವಾಗಿ ನಿರ್ಮಿಸಿದ್ದು ಇಲ್ಲೆ ಆಗಿದೆ. ನಮ್ಮ ನಿರೀಕ್ಷೆಗಿಂತಲೂ ಮಿಗಿಲಾಗಿ, ಶಾಸ್ತ್ರಬದ್ಧವಾಗಿ ದೇವಾಲಯ ನಿರ್ಮಾಣವಾಗಿದೆ. ಈ ಕೈಂಕರ್ಯಕ್ಕೆ ನೆರವಾದ. ಸಕಲರಿಗೂ ದೇವರು ಒಳಿತು ಮಾಡಲಿ ಎಂದು ಆಶೀರ್ವದಿಸಿದರು.ಬಳಿಕ ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವರಾಮ ಭಾಗವತ್ ಕನಕನಹಳ್ಳಿ ಇವರಿಂದ ಗಾಯನ ಒಳಗೊಂಡಂತೆ ಸತೀಶ್ ಯಲ್ಲಾಪುರ ಇವರಿಂದ ಗಾನ ಕುಂಚ, ತಬಲಾ ಸಾಥ್‌ನಲ್ಲಿ ಎನ್.ಜಿ. ಹೆಗಡೆ ಕಪ್ಪೆಕೆರೆ, ಕೀಬೋರ್ಡ್ ನಲ್ಲಿ ಚಂದ್ರಶೇಖರ್ ಭಂಡಾರಿ, ತಾಳದಲ್ಲಿ ಸಮರ್ಥ ಹೆಗಡೆ ಸಾಥ್ ನೀಡಿದರು.ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ವಿ.ಶ್ರೀಶಾನಂದ ಹಾಗೂ ಉದ್ಯಮಿ ಮಾರಣಕಟ್ಟೆ ಮಂಜ ಹೈದರಬಾದ್ ಮಾತನಾಡಿದರು. ಶಂಭುಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ನರಸಿಂಹ ಪಂಡಿತ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಪಂ.ಪರಮೇಶ್ವರ ಹೆಗಡೆ ಕಲ್ಭಾಗ ಅವರಿಂದ ಗಾಯನ ಹಾಗೂ ಡಾ. ಶ್ರೀನಿಧಿ ಗೌಡ ಉಡುಪಿ ಇವರಿಂದ ನೃತ್ಯ ಕಾರ್ಯಕ್ರಮ ನೆರೆದವರನ್ನು ರಂಜಿಸಿತು.