ಸುಳ್ಯ: ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಶೇಣಿ, ನಾಟಿಕೇರಿ ಸೇವಾ ಟ್ರಸ್ಟ್ ಶೇಣಿ ಆಶ್ರಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಸುಳ್ಯ, ಭಾರತೀಯ ಅಂಚೆ ಇಲಾಖೆ ಪುತ್ತೂರು ಮತ್ತು ಶ್ರೀ ರಾಮ ದೇವಾಲಯ ಚೊಕ್ಕಾಡಿ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮ ಚೊಕ್ಕಾಡಿ ಶ್ರೀ ರಾಮ ದೇವಾಲಯದ ದೇಸೀ ಭವನದಲ್ಲಿ ಭಾನುವಾರ ನಡೆಯಿತು.ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಶೇಣಿ ಮತ್ತು ನಾಟಿಕೇರಿ ಸೇವಾ ಟ್ರಸ್ಟ್ ಶೇಣಿ ಅಧ್ಯಕ್ಷ ಶಿವಸುಬ್ರಹ್ಮಣ್ಯ ಭಟ್ ನಾಟಿಕೇರಿ ಅಧ್ಯಕ್ಷತೆ ವಹಿಸಿದ್ದರು. ಸರೋಜಿನಿ ಪ್ರತಿಷ್ಠಾನ ಚೂಂತಾರು ಸಂಸ್ಥಾಪಕ ಮತ್ತು ಖ್ಯಾತ ದಂತ ವೈದ್ಯ ಮುರಲೀ ಮೋಹನ ಚೂಂತಾರು ಉದ್ಘಾಟಿಸಿ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ನಮ್ಮ ಜೀವನ ಶೈಲಿ, ಕೆಲಸದ ಒತ್ತಡ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದ ಕಾರಣದಿಂದ ಪ್ರತಿಯೊಬ್ಬರೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ರೋಗದ ಜೊತೆ ಹೋರಾಡುವ ಬದಲು ರೋಗದ ಜೊತೆಗೆ ಬದುಕಲು ಕಲಿಯಬೇಕು ಎಂದರು. ಕೆವಿಜಿ ಮೆಡಿಕಲ್ ಕಾಲೇಜಿನ ಇಎನ್‌ಟಿ ತಜ್ಞ ಡಾ.ಹರ್ಷ, ಶ್ರೀ ರಾಮ ಸೇವಾ ಸಮಿತಿ ಚೊಕ್ಕಾಡಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಸಮಿತಿಯ ಸ್ಥಾಪಕಾಧ್ಯಕ್ಷ ಧರ್ಮಪಾಲ ಎಸ್., ಭಾರತೀಯ ಅಂಚೆ ಇಲಾಖೆಯ ಅಧಿಕಾರಿ ಬಾಬು ದಾಸನಕಜೆ ಮತ್ತಿತರರು ಇದ್ದರು.

ಧರ್ಮಪಾಲ ಎಸ್.ಶೇಣಿ ಸ್ವಾಗತಿಸಿದರು. ದೀಕ್ಷಿತ್ ಪೋನಡ್ಕ ವಂದಿಸಿದರು. ವಿವೇಕ್ ರೈ ಶೇಣಿ ನಿರೂಪಿಸಿದರು.ಸುಮಾರು 200ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.