ಸಾರಾಂಶ
ರಸ್ತೆ ದುರಸ್ತಿ ಪಡಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಗಮನ ಹರಿಸಿಲ್ಲ. ಅರ್ಧ ಭಾಗ ಮಾತ್ರ ರಸ್ತೆಯನ್ನು ದುರಸ್ತಿ ಮಾಡಿ ಇನ್ನುಳಿದ ಅರ್ಧ ರಸ್ತೆಯನ್ನು ಹಾಗೇ ಬಿಡಲಾಗಿದೆ. ಇದರಿಂದ ಗುಂಡಿ ಬಿದ್ದ ರಸ್ತೆಯಲ್ಲಿ ನೀರು ತುಂಬಿ ಕೆಸರು ಗದ್ದೆಯಂತಾಗಿದೆ ಎಂದು ಕಿಡಿಕಾರಿದರು.
ಮದ್ದೂರು: ಮಳೆಯಿಂದಾಗಿ ಕೆಸರು ಗದ್ದೆಯಾದ ರಸ್ತೆಯಲ್ಲೇ ನಾಟಿ ಮಾಡಿದ ತಾಲೂಕಿನ ದೇಶಹಳ್ಳಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಗ್ರಾಮದ ಗರೀಬಿ ತಿಟ್ಟಿನಲ್ಲಿ ಗಾಂಧಿನಗರದ ರಸ್ತೆಯು ಕಳೆದ 6 ವರ್ಷಗಳಿಂದ ಗುಂಡಿ ಬಿದ್ದು ಅದ್ವಾನಗೊಂಡಿದೆ. ರಸ್ತೆ ದುರಸ್ತಿ ಮಾಡದ ಸ್ಥಳೀಯ ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಕೆಲ ದಿನಗಳಿಂದ ಆಗಾಗ್ಗೆ ಸುರಿಯುವ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಗುಂಡಿ ಬಿದ್ದು ಹಾಳಾಗಿದೆ. ಶಾಲಾ ಮಕ್ಕಳು, ದ್ವಿಚಕ್ರ ವಾಹನ ಸವಾರರು ತೆರಳಲು ಸಾಧ್ಯವಾಗ ಸ್ಥಿತಿ ನಿರ್ಮಾಣವಾಗಿದೆ ಎಂದು ಧಿಕ್ಕಾರದ ಘೋಷಣೆ ಕೂಗಿದರು.
ರಸ್ತೆ ದುರಸ್ತಿ ಪಡಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಗಮನ ಹರಿಸಿಲ್ಲ. ಅರ್ಧ ಭಾಗ ಮಾತ್ರ ರಸ್ತೆಯನ್ನು ದುರಸ್ತಿ ಮಾಡಿ ಇನ್ನುಳಿದ ಅರ್ಧ ರಸ್ತೆಯನ್ನು ಹಾಗೇ ಬಿಡಲಾಗಿದೆ. ಇದರಿಂದ ಗುಂಡಿ ಬಿದ್ದ ರಸ್ತೆಯಲ್ಲಿ ನೀರು ತುಂಬಿ ಕೆಸರು ಗದ್ದೆಯಂತಾಗಿದೆ ಎಂದು ಕಿಡಿಕಾರಿದರು.ನಿತ್ಯ ಈ ರಸ್ತೆಯಲ್ಲಿ ನೂರಾರು ಮಕ್ಕಳು, ಜನರು, ಯುವಕರು ಸಂಚರಿಸುತ್ತಾರೆ. ರಸ್ತೆ ಹಾಳಾಗಿರುವುದರಿಂದ ಹಲವರು ಬಿದ್ದು ಗಾಯಗೊಂಡಿದ್ದಾರೆ. ಜೋರು ಮಳೆ ಸುರಿದರೆ ಮನೆಯೊಳಗೆ ನೀರು ಹರಿಯುತ್ತಿದೆ. ಕೂಡಲೇ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಿವರಾಮು, ಚಿನ್ನಮ್ಮ, ರವಿ, ಗೋವಿಂದ್ , ಗಿರಿ ಸೇರಿ ಹಲವರು ಭಾಗವಹಿಸಿದ್ದರು.