ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ ಪ್ರಕೃತಿ ಮನುಷ್ಯನ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ ಆದರೆ ದುರಾಸೆಗಳನ್ನಲ್ಲ ಎಂಬುದನ್ನ ಮನುಷ್ಯ ಅರಿಯಬೇಕು ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಹೇಳಿದರು.ನಗರದ ಆದಿಚುಂಚನಗಿರಿ ಪ್ರಾಥಮಿಕ ಆಂಗ್ಲ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕೃತಿ ಮನುಷ್ಯನಿಗೆ ಉಚಿತವಾಗಿ ನೀಡಿದ ಗಾಳಿ, ಬೆಳಕು, ನೀರು ಮನುಷ್ಯನ ದುರಾಸೆಯಿಂದ ಹಣ ಕೊಟ್ಟು ಖರೀದಿಸುವಂತಹ ಕಾಲ ನಡೆಯುತ್ತಿರುವುದು ವಿಷಾದ ಸಂಗತಿ ಎಂದರು.ಮರ ಗಿಡಗಳನ್ನು ನೆಡುವುದು, ಅರಣ್ಯ ಸಂಪತ್ತುಗಳನ್ನು ಕಾಪಾಡುವುದು ಅರಣ್ಯ ಇಲಾಖೆಯ ಕೆಲಸ ಮಾತ್ರವಲ್ಲ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ ಎಂಬುದನ್ನು ನಾವ್ಯಾರೂ ಮರೆಯಬಾರದು. ಹಸಿರೇ ನಮ್ಮ ಉಸಿರು ಎಂಬುದು ಸಂದೇಶಕ್ಕೆ ಮಾತ್ರ ಸೀಮಿತವಾಗದೆ ಕಾರ್ಯಗತವಾಗಬೇಕಿದೆ ಎಂದು ಕರೆ ನೀಡಿದರು.ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಶಿವಕುಮಾರ್ ಮಾತನಾಡಿ, ತಮ್ಮ ರೈತರು ಕೃಷಿ ಭೂಮಿಯ ಬದಿಯಲ್ಲಿ ಹಣ್ಣು ಹಂಪಲು ಸೇರಿದಂತೆ ಇತರ ಗಿಡ ಮರಗಳನ್ನು ಬೆಳೆಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿ. ಇದರಿಂದ ರೈತರಿಗೆ ಲಾಭವಾಗಲಿದೆ ಆ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕೂಡ ರೈತಾಪಿ ವರ್ಗಕ್ಕೆ ರಿಯಾಯಿತಿ ದರದಲ್ಲಿ ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು. ಅದೇ ರೀತಿ ನಗರವಾಸಿಗಳು ಸಹ ತಮ್ಮ ಮನೆಗಳ ಸುತ್ತಮುತ್ತ ಇರುವ ಸ್ಥಳಗಳಲ್ಲಿ ದಿನ ಬಳಸಬಹುದಾದ ನಿಂಬೆ, ಕರಿಬೇವು, ಪೇರಲ ಗಿಡ ಸೇರಿದಂತೆ ತಾವು ಬಯಸುವ ಹೂವು, ಹಣ್ಣುಹಂಪಲು ಗಿಡಮರಗಳನ್ನು ಬೆಳೆಸಿ ಹಾಗೂ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಮಾತನಾಡಿ, ಶಾಲೆಯ ಕಾರ್ಯದರ್ಶಿ ಆಗಿರುವ ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಶಿಕ್ಷಣ ಮಾತ್ರ ನೀಡುವುದಿಲ್ಲ ಇದರ ಜೊತೆಗೆ ಸಂಸ್ಕಾರ,ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಅರಿವು ಇತ್ಯಾದಿ ಸಮಾಜಮುಖಿ ಗುಣಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವ ಕೆಲಸವನ್ನು ನಮ್ಮ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಮಕ್ಕಳಿಗೆ ಎಚ್ಚರಿಸಿದ ಅವರು, ಪ್ಲಾಸ್ಟಿಕ್ ಮುಕ್ತ ಸುಂದರ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಜವಾಬ್ದಾರಿ ಏನೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ಶಾಲೆಯ ಬೋಧಕ ಬೋಧಕ್ಕೆ ತರ ಸಿಬ್ಬಂದಿ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಅವರ ನೇತೃತ್ವದಲ್ಲಿ ತಾಲ್ಲೂಕಿನ ಗೀಜಿಹಳ್ಳಿ, ಮುದ್ರಂಗನಹಳ್ಳಿ ಮತ್ತು ಸಿದ್ಧರಹಟ್ಟಿ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ವಿತರಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದು ಗಮನಸೆಳೆಯಿತು.