ಸಾರಾಂಶ
ಬಂಗಾರಪೇಟೆ: ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಹಾಗೂ ಎಎಸ್ಐ ಶಿವಶಂಕರರೆಡ್ಡಿಯವರನ್ನು ಅಮಾನತು ಮಾಡಿ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕ ಲಾಭು ರಾಮ್ ಆದೇಶ ಹೊರಡಿಸಿದ್ದಾರೆ. ಆಲದ ಮರದ ಬಳಿ ಎಚ್ಪಿ ನಗರದಲ್ಲಿ ಮಹಿಳೆಯೊಬ್ಬಳ ಚಿನ್ನದ ಸರವನ್ನು ಇಬ್ಬರು ಅಪರಿಚತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸರ ಕದಿಯಲು ಯತ್ನಿಸಿದ ಬಗ್ಗೆ ಮಹಿಳೆ ದೂರು ನೀಡಿದ್ದರೂ ದಾಖಲಿಸದೆ ಅಸೆಡ್ಡೆ ತೋರಿದ್ದರು. ಈ ಬಗ್ಗೆ ಕೆಜಿಎಫ್ ಎಸ್ಪಿ ರವರು ಸೂಕ್ತ ಕ್ರಮಕ್ಕೆ ಸೂಚಿಸಿದ್ದರೂ ಸಹ ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸದೆ ಕಡೆಗಣಿಸಿದ್ದರು ಹಾಗೂ ಅಜೇಯ್ ಸಿಂಗ್ ಎಂಬ ಗಾಂಜಾ ಪೆಡ್ಲರ್ ನನ್ನು ಪೇದೆ ಸಂತೋಷ್ ಎಎಸ್ಐ ಶಿವಶಂಕರರೆಡ್ಡಿ ಮುಂದೆ ಹಾಜರುಪಡಿಸಿದ್ದು, ಅವರು ಹಾಗೂ ಇನ್ಸ್ಪೆಕ್ಟರ್ ನಂಜಪ್ಪ ಸೂಕ್ತ ವಿಚಾರಣೆ ಮಾಡದೆ ನಿರ್ಲಕ್ಷ್ಯವಹಿಸಿ ಆರೋಪಿಯನ್ನು ಬಿಟ್ಟು ಕಳುಹಿಸಿದ್ದರಿಂದ ಗಸ್ತಿನಲ್ಲಿದ್ದ ಮಹಿಳಾ ಎಎಸೈ ಫರೀದಾಬಾನು ಅವರ ಮೇಲೆ ಆರೋಪಿ ಅಜೇಯ್ ಸಿಂಗ್ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ, ಈ ಮೂಲಕ ತಾವು ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ, ಬೇಜವಾಬ್ದಾರಿ ಮತ್ತು ದುರ್ನಡತೆ ತೋರಿರುವುದು ಕಂಡು ಬಂದಿದೆ ಎಂದು ಇಬ್ಬರನ್ನು ಅಮಾನತುಗೊಳಿಸಿದ್ದಾರೆ.