ಸಾರಾಂಶ
‘ಪಕ್ಷದ ಕೆಲ ನಾಯಕರಲ್ಲಿ ಶಿಸ್ತು ಇಲ್ಲ. ನಾಯಕರೇ ಶಿಸ್ತು ಮೈಗೂಡಿಸಿಕೊಳ್ಳದಿದ್ದರೆ ಕಾರ್ಯಕರ್ತರು ಶಿಸ್ತಾಗಿ ಇರಲು ಹೇಗೆ ಸಾಧ್ಯ? ಯಾವ ನಾಯಕರೂ ಪಕ್ಷಕ್ಕಿಂತ ನಾವು ದೊಡ್ಡವರು ಎಂದು ಭಾವಿಸಬಾರದು. ಪಕ್ಷವನ್ನು ನೆಲಸಮ ಮಾಡಲು ಹೋಗಬೇಡಿ’
ಬೆಂಗಳೂರು : ‘ಪಕ್ಷದ ಕೆಲ ನಾಯಕರಲ್ಲಿ ಶಿಸ್ತು ಇಲ್ಲ. ನಾಯಕರೇ ಶಿಸ್ತು ಮೈಗೂಡಿಸಿಕೊಳ್ಳದಿದ್ದರೆ ಕಾರ್ಯಕರ್ತರು ಶಿಸ್ತಾಗಿ ಇರಲು ಹೇಗೆ ಸಾಧ್ಯ? ಯಾವ ನಾಯಕರೂ ಪಕ್ಷಕ್ಕಿಂತ ನಾವು ದೊಡ್ಡವರು ಎಂದು ಭಾವಿಸಬಾರದು. ಪಕ್ಷವನ್ನು ನೆಲಸಮ ಮಾಡಲು ಹೋಗಬೇಡಿ’
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಜ್ಯ ನಾಯಕರಿಗೆ ನೀಡಿರುವ ಖಡಕ್ ಎಚ್ಚರಿಕೆ ಇದು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರ ಹಂಚಿಕೆ, ಬಣ ರಾಜಕೀಯ ಹಾಗೂ ಜಾತಿಗಣತಿ ವರದಿಗಳ ಕುರಿತು ಶಿಸ್ತು ಉಲ್ಲಂಘಿಸಿ ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರು, ಸಚಿವರು, ನಾಯಕರು ಯಾರೂ ಪಕ್ಷದ ಶಿಸ್ತು ಮೀರಬಾರದು. ಪಕ್ಷ ತಾಯಿ ಇದ್ದಂತೆ ಸರ್ಕಾರ ಮಗು ಇದ್ದಂತೆ. ಯಾವ ನಾಯಕರೂ ಪಕ್ಷವನ್ನು ನೆಲಸಮ ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಒಂದು ವೇಳೆ ಪಕ್ಷವನ್ನು ನೆಲಸಮ ಮಾಡಲು ಮುಂದಾದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮ ನಾಯಕರಲ್ಲಿ ಕೆಲವರಿಗೆ ಶಿಸ್ತು ಇಲ್ಲ. ಪಕ್ಷಕ್ಕಿಂತ ನಾವು ದೊಡ್ಡವರು ಎಂಬ ಭಾವನೆ ಕೆಲವರಲ್ಲಿ ಇದ್ದಂತಿದೆ. ಈಗಲೂ ನಾನು ಮನವಿ ಮಾಡುತ್ತೇನೆ. ಶಾಸಕರು, ನಾಯಕರು, ಸಚಿವರು ಯಾರೂ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವಯುತವಾಗಿ ಕಾಣಬೇಕು ಎಂದು ಮನವಿ ಮಾಡಿದರು.
ಜಾತಿಗಣತಿ ಪರ ಸಂದೇಶ ರವಾನೆ:
ಇದೇ ವೇಳೆ ಜಾತಿಗಣತಿ ವರದಿ ಬಗ್ಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಯಾರ ವಿರುದ್ಧವೂ ಅಲ್ಲ. ಜಾತಿಗಣತಿಯನ್ನು ಎಲ್ಲರಿಗೂ ಅವರ ಹಕ್ಕುಗಳು ದೊರೆಯಬೇಕು, ಸಣ್ಣ ಸಮುದಾಯಗಳಿಗೂ ಹಕ್ಕುಗಳು ಸಿಗಬೇಕು ಎಂಬ ಕಾರಣಕ್ಕೆ ಮಾಡಲಾಗಿದೆ. ಇದು ಎಚ್.ಕೆ.ಪಾಟೀಲ್ ವಿರುದ್ಧವೋ ಅಥವಾ ಡಿ.ಕೆ.ಶಿವಕುಮಾರ್ ವಿರುದ್ಧವೋ ಅಲ್ಲ ಎಂದು ಹೇಳಿದರು. ತನ್ಮೂಲಕ ಪರೋಕ್ಷವಾಗಿ ಜಾತಿ ಗಣತಿ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯದ ವಿರುದ್ಧವಲ್ಲ ಎಂಬ ಸಂದೇಶ ರವಾನಿಸಿದರು.
ಪಕ್ಷ ಸಂಘಟನೆಗೆ ಕೆಲಸ ಮಾಡಿ: 2025ನ್ನು ಪಕ್ಷ ಸಂಘಟನೆ ವರ್ಷ ಎಂದು ಘೋಷಿಸಿದ್ದೇವೆ. ಇದಕ್ಕೆ ಸರಿಯಾಗಿ ಕೆಲಸ ಮಾಡಿ. ಜ.21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಯಶಸ್ವಿಗೊಳಿಸಿ. ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಮಾಡಿ ರಾಜ್ಯದಲ್ಲಿ 100 ಗಾಂಧಿ ಭಾರತ ಕಚೇರಿಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ.
ಸಭೆಗೆ ರಾಜಣ್ಣ, ಪರಂ ಗೈರು:
ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆಗೆ ಸಚಿವರಾದ ಕೆ.ಎನ್.ರಾಜಣ್ಣ, ಡಾ.ಜಿ. ಪರಮೇಶ್ವರ್ ಅವರು ಗೈರಾಗಿದ್ದರು. ಬಳಿಕ ಸಿಎಲ್ಪಿ ಸಭೆಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಸುರ್ಜೆವಾಲ, ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷವನ್ನು ಮುನ್ನಡೆಸಿದ್ದ ಅವರಿಗೆ ಶಿಸ್ತಿನ ಬಗ್ಗೆ ಅರಿವಿದೆ ಎಂದಷ್ಟೇ ಹೇಳಿದರು.
ಮುಂದಿನ ತಿಂಗಳು ಫೆಬ್ರವರಿ ತಿಂಗಳಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಒಟ್ಟಿಗೆ ಈ ಎಲ್ಲಾ ಕಚೇರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ 74 ಕಚೇರಿಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ತ್ವರಿತಗತಿಯಲ್ಲಿ ನಿರ್ಮಾಣಕ್ಕೆ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಶಾಸಕರ ರಬ್ಬರ್ ಸ್ಟ್ಯಾಂಪ್ಗಳನ್ನು ಪದಾಧಿಕಾರಿಗಳಾಗಿ ನೇಮಿಸಲ್ಲ:
ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ವರ್ಷ ಪಂಚಾಯ್ತಿ ಮತ್ತು ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸುತ್ತೇವೆ. ಜತೆಗೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ತಳಮಟ್ಟದಲ್ಲಿ ಹೆಚ್ಚು ಪದಾಧಿಕಾರಿಗಳ ನೇಮಕಕ್ಕೆ ನಿರ್ಧಾರ ಮಾಡಿದ್ದೇವೆ. ಈ ವೇಳೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಆದರೂ ಶಾಸಕರ ರಬ್ಬರ್ಸ್ಟ್ಯಾಂಪ್ ಆಗಿರುವವರನ್ನು ಪದಾಧಿಕಾರಿಗಳಾಗಿ ನೇಮಿಸುವುದಿಲ್ಲ ಎಂದು ಸುರ್ಜೇವಾಲ ಹೇಳಿದರು.
ಸಚಿವರ ಕಾರ್ಯವೈಖರಿ ವರದಿ ಸಲ್ಲಿಕೆ:
ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲೇ ಸಚಿವರ 20 ತಿಂಗಳ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಕುರಿತ ವರದಿಯನ್ನು ಡಿ.ಕೆ. ಶಿವಕುಮಾರ್ ಅವರು ಸುರ್ಜೇವಾಲ ಅವರಿಗೆ ಸಲ್ಲಿಸಿದರು. ಇದು ಸಚಿವರ ಸಚಿವ ಸ್ಥಾನದ ಹಣೆಬರಹ ಬರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ವರದಿ ತೀವ್ರ ಮಹತ್ವ ಪಡೆದುಕೊಂಡಿದೆ.
ಬಳಿಕ ಮಾತನಾಡಿದ ಸುರ್ಜೇವಾಲ, 60 ದಿನಗಳಲ್ಲಿ ಎಲ್ಲಾ ಸಚಿವರನ್ನು ಪ್ರತ್ಯೇಕವಾಗಿ ಕರೆಯಿಸಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಪಕ್ಷ ಹಾಗೂ ಸರ್ಕಾರ ಒಟ್ಟಾಗಬೇಕು. ಕೇಂದ್ರ ಬಿಜೆಪಿ ಸರ್ಕಾರ ಎಸ್ಸಿ,ಎಸ್ಟಿ ವರ್ಗದ ವಿದ್ಯಾರ್ಥಿವೇತನ ಕಡಿತ ಮಾಡಿದೆ. ಈ ಬಿಜೆಪಿಯ ಮನುಸ್ಮೃತಿ ಮನಃಸ್ಥಿತಿಯನ್ನು ಜನರಿಗೆ ಮುಟ್ಟಿಸಬೇಕು. ಕೇಂದ್ರ ಸಚಿವರಾದ ಅಮಿತ್ ಶಾ ಅಂಬೇಡ್ಕರ್ ಅವರನ್ನು ಅವಮಾನಿಸಿದರು. ಸಂಸತ್ತಿನ ಒಳಗಡೆಯೇ ಅಣುಕಿಸಿದರು. ಇದು ಕೇವಲ ದಲಿತರನ್ನಷ್ಟೇ ಅಲ್ಲ, ಇಡೀ ದೇಶವನ್ನೇ ಅವಮಾನಿಸಿದಂತೆ. ಈ ಬಗ್ಗೆ ಅಭಿಯಾನದ ರೂಪದಲ್ಲಿ ಹೋರಾಟಗಳು ಆಗಬೇಕು ಎಂದು ಹೇಳಿದರು.