ಬೆಳಗ್ಗೆ ೮.೩೦ರಿಂದ ೯.೩೦, ಮಧ್ಯಾಹ್ನ ೩.೩೦ರಿಂದ ೪ರವರೆಗೆ ಸಂಚಾರ ಬೇಡ

---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇತ್ತೀಚೆಗೆ ತಾಲೂಕಿನ ಚಿಕ್ಕತುಪ್ಪೂರ್‌ ಗೇಟ್‌ ಬಳಿ ಟಿಪ್ಪರ್‌ ಮತ್ತು ಶಾಲಾ ವಾಹನದ ಭೀಕರ ಅಪಘಾತದ ಬಳಿಕ ಕೊನೆಗೂ ಸರ್ಕಾರ ಎಚ್ಚೆತ್ತಿದ್ದು, ಶಾಲಾ ಅವಧಿಯಲ್ಲಿ ಟಿಪ್ಪರ್‌ಗಳ ಸಂಚಾರಕ್ಕೆ ತಡೆ ಕೊಟ್ಟಿದೆ. ಶಾಲೆ ಶುರು ಮತ್ತು ಬಿಡುವ ವೇಳೆಯಲ್ಲಿ ಟಿಪ್ಪರ್‌ಗಳು ಸಂಚರಿಸಬಾರದೆಂದು ಜಿಲ್ಲಾ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ರಾಜೇಶ್‌ ಸೂಚನೆ ಹೊರಡಿಸಿದ್ದಾರೆ.

ಪ್ರತಿ ದಿನ ಬೆಳಗ್ಗೆ ೮.೩೦ರಿಂದ ೯.೩೦ರ ತನಕ ಮತ್ತು ಶಾಲಾ ಬಿಡುವ ಮುನ್ನ ೪ರಿಂದ ೫ ಗಂಟೆವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಟಿಪ್ಪರ್‌ಗಳು ಸಂಚರಿಸದಂತೆ ಎಚ್ಚರವಹಿಸಬೇಕು ಎಂದು ಜಿಲ್ಲೆಯ ಎಲ್ಲಾ ಕ್ವಾರಿ ಹಾಗೂ ಕ್ರಸರ್‌ ಮಾಲೀಕರಿಗೆ ಸೂಚಿಸಿದ್ದಾರೆ.

ಮಾ.17ರಂದು ಸಂಭವಿಸಿದ ಅಪಘಾತದಿಂದಾಗಿ ಚಾಲಕ ಹಾಗೂ ನಾಲ್ವರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಸಾರ್ವಜನಿಕರಿಂದ ಟಿಪ್ಪರ್‌ಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.


ಭೂವಿಜ್ಞಾನಿ ರಾಜೇಶ್‌ ಅವರು ತಮ್ಮ ಆದೇಶಪ್ರತಿಯಲ್ಲಿ ಪತ್ರಿಕೆಗಳು, ರೈತ ಸಂಘಟನೆಗಳು, ಮಾಜಿ ಶಾಸಕರು, ಶಿಂಡನಪುರ, ಕಂದೇಗಾಲ ಗ್ರಾಮಸ್ಥರ ಪ್ರತಿಭಟನೆಯನ್ನು ಮೆಲುಕು ಹಾಕಿದ್ದಾರೆ.