ಸಾರಾಂಶ
ಪಟ್ಟಣದ ಸಂಗಾತ್ರಯ ಪಾಠಶಾಲೆಯಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ನರೇಗಾ ದಿನಾಚರಣೆ ಮತ್ತು ಕಾರ್ಯಾಗಾರ ಜರುಗಿತು.
ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದ ಸಂಗಾತ್ರಯ ಪಾಠಶಾಲೆಯಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ನರೇಗಾ ದಿನಾಚರಣೆ ಮತ್ತು ಕಾರ್ಯಾಗಾರ ಜರುಗಿತು.ಶಾಸಕ ಜೆ.ಎನ್. ಗಣೇಶ್ ಚಾಲನೆ ನೀಡಿ ಮಾತನಾಡಿ, ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನಲ್ಲಿ ಉತ್ತಮವಾದ ಗುಣಾತ್ಮಕ ಬದಲಾವಣೆ ತಂದಿದೆ. ಸರ್ಕಾರ ಗ್ರಾಮೀಣ ಕುಟುಂಬಗಳು ಸುಸ್ಥಿತಿಗೆ ಬರುವ ಯೋಜನೆ ಹಾಕಿಕೊಂಡಿದೆ. ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದೆ ಜೊತೆಗೆ ಕಾರ್ಮಿಕರಿಗೆ ವಿಮೆ, ಈ ಶ್ರಮ್ ಕಾರ್ಡ್ ಸೌಲಭ್ಯ ಒದಗಿಸಿದ್ದು ಅದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಪಂ ಇಒ ಆರ್.ಕೆ. ಶ್ರೀಕುಮಾರ್ ಮಾತನಾಡಿ, ಕಳೆದ ವರ್ಷ 7.90 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಿದ್ದು 9 ಲಕ್ಷ ಮಾನವ ದಿನಗಳನ್ನು ಸೃಜಿಸಿ ಗುರಿಮೀರಿ ಸಾಧನೆ ಮಾಡಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ 250ಕ್ಕೂ ಹೆಚ್ಚು ದನದ ಕೊಠಡಿಗಳನ್ನು ನಿರ್ಮಿಸಿದೆ. ರಸ್ತೆ, ಚರಂಡಿ, ಶಾಲಾ ಮೈದಾನ, ಶಾಲಾವರಣ ನಿರ್ಮಾಣ ಮೊದಲಾದ ನರೇಗಾ ಕಾಮಗಾರಿಗಳನ್ನು ಕೈಗೊಂಡು ಉತ್ತಮ ಸಾಧನೆಗೈದಿದೆ ಎಂದರು.ನರೇಗಾ ಮೂಲಕ ಅತ್ಯುತ್ತಮ ಸಾಧನೆಗೈದ ನಂ.10 ಮುದ್ದಾಪುರ ಗ್ರಾಪಂ ಅಧ್ಯಕ್ಷೆ ಸೋಮೇಶ್ವರಿ, ಪಿಡಿಒ ಪಿ.ಶಿಲ್ಪಾರಾಣಿ, ತಾಂತ್ರಿಕ ಸಹಾಯಕ ಲೋಕೇಶ್, ದೇವಲಾಪುರ ಗ್ರಾಪಂ ಡಿಇಒ ರಾಜು, ಬಿಎಫ್ಟಿ ಪಂಪಾಪತಿ, ಮೆಟ್ರಿ ಗ್ರಾಪಂಯ ಜಿಕೆಎಂ ರಂಜಿನಿ, ಆರ್ಎಫ್ಓ ಪರಶುರಾಮ ಶಿರಬಡಿಗಿ, ಪಶುಸಖಿ ವಿ.ಅನಂತಕುಮಾರಿ, ಹತ್ತು ಜನ ಕಾಯಕ ಬಂಧುಗಳನ್ನು, ಅಧ್ಯಕ್ಷ-ಉಪಾಧ್ಯಕ್ಷರನ್ನು ಗೌರವಿಸಲಾಯಿತು. ಕಾಯಕ ಬಂಧುಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಈ ಸಂದರ್ಭ ನರೇಗಾ ಎಡಿ ಕೆ.ಎಸ್. ಮಲ್ಲನಗೌಡ, ಪುರಸಭೆ ಸದಸ್ಯ ಸಿ.ಆರ್. ಹನುಮಂತ, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ರೆಹಮಾನ್, ಎಮ್ಮಿಗನೂರು ಗ್ರಾಪಂ ಅಧ್ಯಕ್ಷೆ ಶಾರದಾ, ಮಾಯಮ್ಮ, ಸೋಮೇಶ್ವರಿ, ರಮಣಯ್ಯ ಸೇರಿ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು, ಕಾಯಕ ಬಂಧುಗಳು, ಗ್ರಾಪಂ ಮತ್ತು ತಾಪಂ ಸಿಬ್ಬಂದಿ ಇತರರಿದ್ದರು.