ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು ತಾಲೂಕಿನ 36 ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ 285 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿದ್ದು, ಮುಂದಿನ ಎರಡೂವರೆ ತಿಂಗಳ ಅವಧಿಯಲ್ಲಿ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ ಜನರಿಗೆ ನೀರು ಒದಗಿಸುವ ಕೆಲಸವನ್ನು ಕೈಗೊಳ್ಳಬೇಕೆಂದು ಶಾಸಕ ಎ.ಮಂಜು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಜೆಜೆಎಂ ಎಂಜಿನಿಯರ್ಗಳು, ಎಲ್ಲಾ ಗ್ರಾಪಂಗಳ ಪಿಡಿಒಗಳು ಮತ್ತು ತಾಪಂ ಇಒ, ಜೆಜೆಎಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಭಾಗವಹಿಸಿದ್ದೀರಿ. ಅಲ್ಲದೆ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದ್ದೀರಿ. ಈ ಅಂಶಗಳನ್ನು ಮನಗಂಡು ಮುಂದಿನ ಎರಡೂವರೆ ತಿಂಗಳ ಅವಧಿಯೊಳಗೆ ನೀರು ಒದಗಿಸುವ ಭರವಸೆಯನ್ನು ನೀಡಿದ್ದೀರಿ. ಇದು ಹುಸಿಯಾದರೇ ಅಧಿಕಾರಿಗಳನ್ನೆ ಹೊಣೆಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ತಾಲೂಕಿನ ಎಲ್ಲಾ 36 ಗ್ರಾಪಂಗಳ ವ್ಯಾಪ್ತಿಯ 256 ಗ್ರಾಮಗಳು ಮತ್ತು 406 ಜನವಸತಿ ಪ್ರದೇಶದಲ್ಲಿ ಕೆಲಸ ಪ್ರಗತಿಯಲ್ಲಿದೆ. ಅಲ್ಲದೆ ಈಗಾಗಲೇ ಪೂರ್ಣಗೊಂಡಿರುವ ಜೆಜೆಎಂ ಪೈಪ್ಲೈನ್ ಮುಖಾಂತರ 228 ಜನವಸತಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು 178 ಜನವಸತಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದ್ದಾರೆ. ಕೂಡಲೇ ಬಾಕಿ ಕೆಲಸಗಳನ್ನು ಮುಗಿಸಿ ಜನರಿಗೆ ನೀರು ಕೊಡುವ ಕೆಲಸವನ್ನು ಮಾಡಬೇಕೆಂದು ಅವರು ಸೂಚನೆ ನೀಡಿದರು.ಪಟ್ಟಣ ಪ್ರದೇಶಗಳಂತೆ ಗ್ರಾಮೀಣ ಭಾಗದ ಜನರಿಗೂ ಕೂಡ ಶುದ್ಧನೀರು ಸರಬರಾಜು ಮಾಡುವ ಪ್ರಮುಖ ಕಾಮಗಾರಿ ಇದಾಗಿದೆ. ಈ ಸಲುವಾಗಿ ಗ್ರಾಪಂ ಮಟ್ಟದಲ್ಲಿ ಈ ಹಿಂದೆ ಇದ್ದ ಹಳೆಯ ನೀರಿನ ಟ್ಯಾಂಕ್ ಸೇರಿದಂತೆ ಒಟ್ಟು 295 ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ 211 ಟ್ಯಾಂಕ್ಗಳ ಕಾಮಗಾರಿ ಪೂರ್ಣಗೊಂಡಿದ್ದು, ಈ ಪೈಕಿ 116 ಗ್ರಾಮಗಳಿಗೆ ಹೊಸ ಟ್ಯಾಂಕ್ಗಳಿಗೆ ನೀರು ತುಂಬಿಸಿ ನೀರನ್ನು ಜೆಜೆಎಂ ಪೈಪ್ ಮೂಲಕ ಕೊಡಲಾಗುತ್ತಿದೆ. 44 ಟ್ಯಾಂಕ್ಗಳ ಕಾಮಗಾರಿ ಪ್ರಗತಿಯಲ್ಲಿದ್ದು, 40 ಟ್ಯಾಂಕ್ಗಳ ಕೆಲಸ ತಾಂತ್ರಿಕ ಕಾರಣದಿಂದ ಇನ್ನೂ ಕೂಡ ಆರಂಭಗೊಂಡಿಲ್ಲ. ಕೂಡಲೇ ಬಾಕಿ ಟ್ಯಾಂಕ್ಗಳ ನಿರ್ಮಾಣ ಆಗಬೇಕಿದೆ. ಜಾಗದ ಸಮಸ್ಯೆಯನ್ನು ಬಗೆಹರಿಸಿ ಕೆಲಸ ಆರಂಭಿಸಬೇಕು ಅವರು ತಿಳಿಸಿದರು. 28 ಗ್ರಾಮಗಳಿಗೆ ಹರ್ ಘರ್ ಜಲ್:ಈಗಾಗಲೇ 28 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಮೂಲ ಯೋಜನೆಯಂತೆ ಈ ಗ್ರಾಮಗಳ ಪ್ರತಿಮನೆಗಳಿಗೆ ನೀರುಕೊಡುವ ಮೂಲಕ ಹರ್ ಘರ್ ಜಲ್ ಯೋಜನೆ ಅನುಷ್ಠಾನಕ್ಕೆ ಬಂದಿದೆ ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.ಸೌಕರ್ಯ ಕಲ್ಪಿಸಿ: ತಾಲೂಕಿನ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಜೆಜೆಎಂ ಸೌಕರ್ಯವನ್ನು ಕಲ್ಪಿಸಬೇಕು. ಇಲ್ಲಿ ಬಳಕೆಯಾಗುವ ನೀರಿನ ತೆರಿಗೆ ಕುರಿತು ಸರ್ಕಾರ ಮುಂದೆ ಪರಿಶೀಲನೆ ನಡೆಸಲಿದೆ. ಯಾವುದೇ ಕಾರಣಕ್ಕೂ ಪೈಪ್ಲೈನ್ ಅಳವಡಿಸುವ ಕೆಲಸವನ್ನು ನಿಲ್ಲಿಸಬಾರದು ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿರುವ ಕುರಿತು ಗ್ರಾಪಂನಿಂದ ಎನ್ಒಸಿ ಪಡೆದೇ ಗುತ್ತಿಗೆದಾರಗೆ ಬಿಲ್ ಪಾವತಿಸಬೇಕು. ಇದನ್ನು ಉಲ್ಲಂಘನೆ ಮಾಡಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಎ.ಮಂಜು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಇಒ ಪ್ರಕಾಶ್,ಎಇಇ ನವೀನ್ ಕುಮಾರ್, ಎಂಜಿನಿಯರ್ಗಳು, ಎಲ್ಲಾ ಗ್ರಾಪಂಗಳ ಪಿಡಿಒಗಳು ಭಾಗವಹಿಸಿದ್ದರು.-----------------------------------------------------------------