ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದ ಯಾವುದೇ ಮೂಲೆಯಲ್ಲೂ ಕಂಬಳ ನಡೆಸಬಹುದು ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಆದ್ದರಿಂದ ಮೈಸೂರು ದಸರಾದಲ್ಲಿ ಕಂಬಳ ನಡೆಸುವುದಕ್ಕೆ ವಿರೋಧಿಸಿಬೇಡಿ, ಸ್ವಾಗತ ಮಾಡಿ ಎಂದು ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ‍ ನಮ್ಮ ನಾಡಿನ ಘನತೆ ಹೆಚ್ಚಿಸುತ್ತಿರುವ ಕ್ರೀಡೆ, ದಸರಾ ನಮ್ಮ ನಾಡ ಹಬ್ಬ, ಹಾಗಿರುವಾಗ ನಾಡಹಬ್ಬದಲ್ಲಿ ಕಂಬಳ ಮಾಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.ಕಂಬಳ ವ್ಯಕ್ತಿ ಪಕ್ಷ ಧರ್ಮಕ್ಕೆ ಸೀಮಿತವಲ್ಲ. ದ.ಕ. ಉಡುಪಿ ಮಾತ್ರವಲ್ಲದೆ ಕಾಸರಗೋಡಿನಲ್ಲೂ ಕೂಡ ಕಂಬಳ ನಡೆದಿದೆ. ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಕಂಬಳದ ಕೋಣಗಳನ್ನು ಸಾಕುತ್ತಾರೆ, ಶ್ರೀಮಂತ ಬಡವರೆಲ್ಲರೂ ಇದರಲ್ಲಿ ಭಾಗವಹಿಸುತ್ತಾರೆ. ಕಂಬಳ ಸಾಮರಸ್ಯಕ್ಕೆ ಒತ್ತು ನೀಡುವ ಕ್ರೀಡೆ. ರಾಜ್ಯದ ಎಲ್ಲ ಜನತೆ ಈ ಕ್ರೀಡೆಯನ್ನು ನೋಡಬೇಕು ಎಂದು ಮೈಸೂರು ದಸರಾದಲ್ಲೂ ಕಂಬಳ ನಡೆಸಲು ನಿರ್ಧರಿಸಲಾಗಿದೆ ಎಂದರು.ಹಿಂದೆ ಮೈಸೂರು ಅರಸರ ಕಾಲದಲ್ಲೂ ಕಂಬಳ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರೇ ಕಂಬಳಕ್ಕೆ ಸಹಾಯ ಮಾಡಿದ ಉದಾಹರಣೆ ಇದೆ. ಈಗ ಕಂಬಳಕ್ಕೆ ಆಧುನಿಕ ಸ್ಪರ್ಶ ಸಿಕ್ಕಿದೆ. ಉದ್ಯಮಿಗಳು ಕಂಬಳಕ್ಕೆ ಕೈಜೋಡಿಸಿದ್ದಾರೆ. ಕಂಬಳದಿಂದ ಯಾವುದೇ ಸಂಪ್ರದಾಯಕ್ಕೆ ಧಕ್ಕೆ ಆಗೋದಿಲ್ಲ, ಕೆಳ ವರ್ಗದವರ ಶೋಷಣೆ ಆಗೋದಿಲ್ಲ. ಇದೆಲ್ಲ ಕೆಲವರು ತಪ್ಪು ಅಪಪ್ರಚಾರ ಎಂದು ಅವರು ಹೇಳಿದರು.ಕಂಬಳ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸಳೆಯುತ್ತಿದೆ. ಉಸೇನ್ ಬೋಲ್ಟ್‌ಗಿಂತಲೂ ಹೆಚ್ಚು ವೇಗದಲ್ಲಿ ಓಡುವ ಕೋಣಗಳು ಮತ್ತು ಕೋಣ ಓಡಿಸುವವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ವಿರೋಧಿಸುವವರು ಇದನ್ನು ತಿಳಿದುಕೊಳ್ಳಲಿ ಎಂದು ಅವರು ಸಲಹೆ ಮಾಡಿದರು.ಸಂಸದ ಯದುವೀರ್ ಒಡೆಯರ್ ಅವರೂ ಸಭೆಯಲ್ಲಿ ಇದ್ದರು. ಕಂಬಳ ಕರಾವಳಿಯ ಕ್ರೀಡೆ ಅಲ್ಲಿ ಆಚರಿಸಲಿ ಎನ್ನುತ್ತಾರೆ. ಆದರೇ ಇಂದು ಕರಾವಳಿಗೆ ಸೀಮಿತವಲ್ಲ, ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಮಾಡಿದ್ದೇವೆ. ನಾವು ಮಂಗಳೂರಿನಲ್ಲಿ ನಿಮ್ಮ ಕುಸ್ತಿ ಸ್ಪರ್ಧೆ ಮಾಡಿಸುತ್ತೇವೆ. ನೀವು ಮೈಸೂರು ದಸರಾದಲ್ಲಿ ನಮ್ಮ ಕಂಬಳ ನೋಡಿ ಎಂದು ದೇವಿಪ್ರಸಾದ್ ಶೆಟ್ಟಿ ಸಲಹೆ ಮಾಡಿದರು.