ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಎಲ್ಲ ಕನ್ನಡಪರ ಸಂಸ್ಥೆಗಳಿಗೆ ಮಾತೃಸಂಸ್ಥೆಯಾಗಿ ಪ್ರಾರಂಭದಿಂದಲೂ ಕನ್ನಡ ನೆಲ- ಜಲ, ಭಾಷೆಯ ಉಳಿವಿಗಾಗಿ ಕಂಕಣಬದ್ಧವಾಗಿದೆ.
ಹರಪನಹಳ್ಳಿ: ಕನ್ನಡ ನಾಡು, ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಉನ್ನತ ಪರಂಪರೆಯನ್ನು ಹೊಂದಿದೆ ಎಂದು ಪಟ್ಟಣದ ತೆಗ್ಗಿನಮಠದ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ ತಿಳಿಸಿದರು.ತಾಲೂಕಿನ ಅನಂತನಹಳ್ಳಿ ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ಕಸಾಪದಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಎಲ್ಲ ಕನ್ನಡಪರ ಸಂಸ್ಥೆಗಳಿಗೆ ಮಾತೃಸಂಸ್ಥೆಯಾಗಿ ಪ್ರಾರಂಭದಿಂದಲೂ ಕನ್ನಡ ನೆಲ- ಜಲ, ಭಾಷೆಯ ಉಳಿವಿಗಾಗಿ ಕಂಕಣಬದ್ಧವಾಗಿದೆ ಎಂದರು.ಸಿಪಿಐ ಸಾಬಯ್ಯ ನಾಯಕ ಮಾತನಾಡಿ, ಮಕ್ಕಳು ಕನ್ನಡ ಸಾಹಿತ್ಯ, ಕಲೆ ಸಂಸ್ಕೃತಿ ಮತ್ತು ಪರಂಪರೆ ತಿಳಿದುಕೊಳ್ಳುವ ಮೂಲಕ ಕನ್ನಡ ಅಭಿಮಾನವನ್ನು ಮೆರೆಯಬೇಕು ಎಂದರು.
ಸಾಹಿತಿ ಕೆ.ಎಸ್. ವೀರಭದ್ರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ತಿಳಿಸಲು ರಂಗಭೂಮಿ ಪರಿಣಾಮಕಾರಿ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಅಧ್ಯಕ್ಷತೆ ಮಾತನಾಡಿ, ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೊಂದಿಗೆ ಕನ್ನಡ ಭಾಷೆ, ನೆಲ- ಜಲ ಅಸ್ಮಿತೆಗೆ ತೊಂದರೆ ಬಂದಾಗ ಕನ್ನಡಿಗರು ಧ್ವನಿ ಎತ್ತಬೇಕು ಎಂದರು.
ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಎಚ್.ಕೆ. ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ಎಂ. ಬಸವನಗೌಡ ಕಸಾಪ ಗೌರವ ಕಾರ್ಯದರ್ಶಿ ಜಿ. ಮಹಾದೇವಪ್ಪ, ಕೋಶಾಧಿಕಾರಿ ಕೆ. ರಾಘವೇಂದ್ರ ಶೆಟ್ಟಿ ಶಿಕ್ಷಕರಾದ ಮಲ್ಲಮ್ಮ, ಪರ್ವಿನ್, ಸಂತೋಷ, ಸೂರ್ಯನಾಯ್ಕ, ವೃಷಭೇಂದ್ರಪ್ಪ ಸೇರಿದಂತೆ ಇತರರು ಇದ್ದರು.