ಬಾಗೇಪಲ್ಲಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯ ಜೊತೆಗೆ ಕೆಲಸದ ಒತ್ತಡಗಳಿಂದ ಮುಕ್ತರಾಗಲು ಸಹಕಾರಿಯಾಗುತ್ತದೆ. ಪತ್ರಕರ್ತರು ವ್ಯಾಯಾಮ,ಯೋಗ್ಯ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಹವ್ಯಾಸ ಮೈಗೂಡಿಸಿಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ ತಿಳಿಸಿದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆ ಆವರಣದಲ್ಲಿ ಪತ್ರಕರ್ತರಿಗಾಗಿ ಭಾನುವಾರ ಆಯೋಜಿಸಲಾಗಿದ್ದ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ನಾಲ್ಕನೇ ಅಂಗವಾಗಿ ಮಹತ್ತರ ಜವಾಬ್ದಾರಿಯನ್ನು ಪತ್ರಕರ್ತರು ನಿರ್ವಹಿಸುತ್ತಿದ್ದಾರೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ, ಕ್ರೀಡೆಗಳು ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಉತ್ತಮ ಕೊಂಡಿಯಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ಸದಾ ಯಾಂತ್ರಿಕಾ ಜೀವನ ನಡೆಸುತ್ತಿರುವ ಪತ್ರಕರ್ತರ ಆರೋಗ್ಯ, ಸ್ನೇಹ ಮತ್ತು ಒಗ್ಗಟ್ಟನ್ನು ಬಲಪಡಿಸುವ ಉದ್ದೇಶದಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಬಿ.ಟಿ.ಚಂದ್ರಶೇಖರರೆಡ್ಡಿ, ಪ್ರಧಾನ ಕಾರ್ಯದರ್ಶಿ ಸೈಯದ್ ಸಿದ್ದೀಕ್, ಸಂಘದ ಪದಾಧಿಕಾರಿಗಳಾದ ಎಸ್.ಎಸ್.ಶ್ರೀನಿವಾಸ್, ಬಿ.ಸುರೇಶ್, ಕರೀಂ ಸಾಬ್, ಅಶ್ವಥನಾರಾಯಣಚಾರಿ(ಮಣಿಕಂಠ), ಮುನಿರಾಜು, ವೆಂಕಟೇಶ್, ಲೋಕೇಶ್, ಗೋಪಾಲರೆಡ್ಡಿ. ಪಿ.ಎಸ್ ರಾಜೇಶ್, ಸದಸ್ಯರಾದ ಬಿ.ಆರ್ ಕೃಷ್ಣ, ಜಿ.ವೆಂಕಟೇಶ್, ನಾಗರಾಜ್, ದೈಹಿಕ ಶಿಕ್ಷಕರಾದ ರಂಗನಾಥ್, ಚಂದ್ರು, ರಘು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್ ಮತ್ತಿತರರು ಇದ್ದರು.
13ಬಿಜಿಪಿ-1: ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಸಂಘದವತಿಯಿಂದ ಪತ್ರಕರ್ತರಿಗಾಗಿ ಬಾಗೇಪಲ್ಲಿಯಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ಪತ್ರಕರ್ತರು ಭಾಗವಹಿಸಿದ್ದರು.