ಸಾರಾಂಶ
ಬೀದರ್ ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ಕಲ್ಯಾಣ ನಾಡಿನ ನಡೆದಾಡುವ ದೇವರು ಡಾ. ಚನ್ನಬಸವ ಪಟ್ಟದ್ದೇವರ ಜಯಂತಿ ನಿಮಿತ್ತ ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಮಾತನಾಡಿದರು.
ಕೆಪಿ ವಿದ್ಯಾ ಸಂಸ್ಥೆಯಲ್ಲಿ ಪೂಜ್ಯರ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ ಬೀದರ್ಕಲ್ಯಾಣ ನಾಡಿನಲ್ಲಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾರ್ಯಗಳನ್ನು 21ನೇ ಶತಮಾನದಲ್ಲಿ ಮತ್ತೆ ಬಸವ ತತ್ವವನ್ನು ಪುನರ್ಸ್ಥಾಪಿಸಿ ನೂತನ ಅನುಭವ ಮಂಟಪದ ಶಿಲ್ಪಿಗಳಾಗಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ಕಾರ್ಯ ಮಾಡಿದ್ದಾರೆ ಎಂದು ಕೆಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ನುಡಿದರು.
ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ಪಟ್ಟದೇವರಾದ ಚನ್ನಬಸವ ಪಟ್ಟದೇವರ 135ನೇ ಜನ್ಮ ಜಯಂತಿ ನಿಮಿತ್ತ ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಿಜಾಮನ ಆಳ್ವಿಕೆಯಲ್ಲಿ ಶಾಲೆಗಳ ಹೊರಗ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡವನ್ನು ಕಲಿಸಿ ಕನ್ನಡ ರಕ್ಷಿಸಿ ಬೆಳೆಸಿದ ಕೀರ್ತಿ ಪರಮ ಪೂಜ್ಯ ಚನ್ನಬಸವ ಪಟ್ಟದೇವರಿಗೆ ಸಲ್ಲುತ್ತದೆ ಎಂದರು.ವಚನ ಸಾಹಿತ್ಯ ಮತ್ತು ಕನ್ನಡಕ್ಕೆ ಅವರ ಸೇವೆ ಅಜರಾಮರವಾಗಿದೆ. ಅವರ ಸೇವೆಯನ್ನು ನಾವು ಸ್ಮರಿಸೋಣ ಎಂದು ಹೇಳಿದರು.
ಶಿವಕುಮಾರ ಕಟ್ಟೆ ಉಪನ್ಯಾಸಕರಾಗಿ ಮಾತನಾಡಿ, ಸಂಸ್ಕಾರಯುತ ಶಿಕ್ಷಣದ ಸೇವೆ ಕೆಪಿ ವಿದ್ಯಾಸಂಸ್ಥೆ ನೀಡುತ್ತಿದೆ. ಪರಮ ಪೂಜ್ಯರ ದಿನಚಾರಣೆಯಾಗಲಿ, ಮಹಾಪುರುಷರ ಜಯಂತಿಯಾಗಲಿ ಈ ವಿದ್ಯಾಸಂಸ್ಥೆ ಅಳವಡಿಸಿಕೊಳ್ಳುತ್ತ ಬಂದಿದೆ. ಇವತ್ತು ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಕೆಲಸ ಕೆಪಿ ವಿದ್ಯಾ ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.ಉದ್ಯಮಿ ಜಯರಾಜ ಖಂಡ್ರೆ ಮಾತನಾಡಿ, ನಡೆ ಮತ್ತು ನುಡಿ ಒಂದಾಗಿ ಬಾಳಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕನ್ನಿಕಾ ಪರಮೇಶ್ವರಿಯ ಮುಖ್ಯಗುರು ವಿಜಯಕುಮಾರ ಪಾಟೀಲ ಯರನಳ್ಳಿ ಸ್ವಾಗತಿಸಿದರು. ಮಹಾನಂದಾ ಪಾಟೀಲ ವಂದಿಸಿದರು.