ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಳೆದ 8 ವರ್ಷಗಳಿಂದ ತೇರದಾಳದಲ್ಲಿ ಸಿದ್ದು ಸವದಿಯವರೇ ಶಾಸಕರಾಗಿದ್ದಾರೆ. ೨೦೧೭ರಿಂದ ಕಾಮಗಾರಿಗೆ ವೇಗ ನೀಡದ್ದಕ್ಕೆ ಸವದಿಯವರ ನಿರ್ಲಕ್ಷ್ಯವೇ ಕಾರಣ ಎಂದು ಕಾಂಗ್ರೆಸ್‌ ಮುಖಂಡ ಸಿದ್ದು ಕೊಣ್ಣೂರ ವಾಗ್ದಾಳಿ ನಡೆಸಿದರು.ಶುಕ್ರವಾರ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಅದರಲ್ಲೂ ರಬಕವಿ-ಬನಹಟ್ಟಿಯ ರಾಮಣ್ಣ ಹುಲಕುಂದ ನೇತೃತ್ವದಲ್ಲಿ ನಾಗರಿಕರು ಕಾಮಗಾರಿ ತ್ವರಿತಕ್ಕೆ ನನಗೆ ಒತ್ತಡ ಹೇರಿದ ನಂತರ ಸಚಿವ ಸತೀಶ ಜಾರಕಿಹೊಳಿ ಹಾಗೂ ಆರ್.ಬಿ.ತಿಮ್ಮಾಪೂರ ನೇತೃತ್ವದಲ್ಲಿ ₹10 ಕೋಟಿ ಹೆಚ್ಚುವರಿ ಹಣದಿಂದ ಒಟ್ಟು ₹55 ಕೋಟಿ ಕಾಮಗಾರಿ ಅನುದಾನ ಬಿಡುಗಡೆಗೊಂಡ ಬಳಿಕ ಕಾಮಗಾರಿ ವೇಗ ಹೆಚ್ಚಿದೆ ಎಂದು ಹೇಳಿದರು.

ಕಾರ್ಯವೂ ಇಲ್ಲ, ಹೋರಾಟವೂ ಇಲ್ಲ: ರಬಕವಿ-ಮಹಿಷವಾಡಗಿ ಸೇತುವೆ ತ್ವರಿತಕ್ಕೆ ಶಾಸಕ ಸಿದ್ದು ಸವದಿಯವರ ಕೊಡುಗೆ ಶೂನ್ಯ. ಅವರದ್ದು ಯಾವುದೇ ಹೋರಾಟವೂ ಇಲ್ಲ. ಕಾರ್ಯವೂ ಇಲ್ಲ. ಸೇತುವೆ ಕಾಮಗಾರಿಯಲ್ಲಿ ರಾಜಕಾರಣ ಮಾಡುತ್ತಿರುವುದು ನಾನಲ್ಲ ಅವರು ಎಂದು ತಿರುಗೇಟು ನೀಡಿದರು. 4 ಬಾರಿ ಶಾಸಕರಾದ ಹಿರಿಯ ರಾಜಕಾರಣಿಗೆ ಈ ರೀತಿ ಅಸಭ್ಯ ಮಾತುಗಳು ಸರಿಯಲ್ಲ. ಯಾವುದೇ ಕಾರ್ಯವಾಗಲಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಕೆಲಸ ಮಾಡುವ ಹಕ್ಕಿದೆ. ವಿನಾಕಾರಣ ಚುನಾವಣೆಯಲ್ಲಿ ಸೋತವರದ್ದೇನು ಕೆಲಸ? ಅವರೇಕೆ ಮಾಡಿಸುತ್ತಾರೆಂಬ ಬಾಲಿಶತನದ ಮಾತುಗಳನ್ನು ಕೈಬಿಡಬೇಕೆಂದರು.

ಕಾಂಗ್ರೆಸ್ ಅವಧಿಯಲ್ಲಿಯೇ ತೇರದಾಳ ಅಭಿವೃದ್ಧಿ: ಕಾಂಗ್ರೆಸ್ ಅವಧಿಯಲ್ಲಿ ₹೧೦ ಕೆಲಸವಾಗಿಲ್ಲವೆಂದು ಹೇಳಿರುವ ಶಾಸಕ ಸವದಿ ಇತಿಹಾಸ ನೋಡಲಿ. ರಾಮಪೂರ ರಸ್ತೆ ದಿಬ್ಬು ಕಡಿದು ಸರಳೀಕರಣ, ವೆಂಕಟೇಶ್ವರ, ಸಸಾಲಟ್ಟಿ ಹಾಗೂ ಢವಳೇಶ್ವರ ಏತ ನೀರಾವರಿ ಹಾಗೂ ಮಿರ್ಜಿ, ಢವಳೇಶ್ವರ, ರಬಕವಿ-ಮಹಿಷವಾಡಗಿ ಸೇತುವೆಗಳಂತಹ ಮಹತ್ತರ ಯೋಜನೆಗಳು ನಡೆದಿರುವುದೇ ಕಾಂಗ್ರೆಸ್ ಅವಧಿಯಲ್ಲಿ ಎಂದು ಹೇಳಿದರು.

ಕ್ಷೇತ್ರದ ಜನತೆ ಸೋಲಿಸಿದ್ದಾರೆಂದು ಹೇಳುತ್ತಿರುವ ಬಿಜೆಪಿ ಶಾಸಕ ಸವದಿ ಅವರು, ಕಳೆದ ಚುನಾವಣೆಯಲ್ಲಿ ೬೭ ಸಾವಿರ ಮತ ಪಡೆದಿದ್ದೇನೆ. ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಯಿಂದ ಸೋತಿದ್ದೇನೆ ಹೊರತು ಬಿಜೆಪಿಯಿಂದಲ್ಲ ಎಂದು ಸ್ಪಷ್ಟಪಡಿಸಿದರು.


ಈ ವೇಳೆ ರಾಮಣ್ಣ ಹುಲಕುಂದ, ಸಂಜೀವ ಜೋತಾವರ, ಸಂಗಮೇಶ ಮಡಿವಾಳ, ಹೊನ್ನಪ್ಪ ಬಿರಡಿ, ಬುದ್ದಪ್ಪ ಕುಂದಗೋಳ, ಭೀಮಶಿ ಪಾಟೀಲ, ಶೇಖರ ಹಳಿಂಗಳಿ, ಮಹ್ಮದ್ ಮಕಾನದಾರ, ಮಹ್ಮದ್ ಝಾರೆ, ಸುನೀಲ ಹರಿಜನ ಸೇರಿದಂತೆ ಅನೇಕರಿದ್ದರು.