ವಿಜ್ಞಾನದಿಂದ ಪರಿಪೂರ್ಣ ವ್ಯಕ್ತಿತ್ವ

| Published : Aug 27 2025, 01:02 AM IST

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನದಂತಹ ವಿಷಯಗಳಲ್ಲಿ ಇಂದು ಉತ್ತಮ ಸಾಧನೆ ಮಾಡುತ್ತಿದ್ದಾರೆ

ಲಕ್ಷ್ಮೇಶ್ವರ: ಸುಜ್ಞಾನದಡಿಯಲ್ಲಿ ವಿಜ್ಞಾನದ ಕಲಿಕೆ ಆಗಬೇಕು. ವಿಜ್ಞಾನದಿಂದ ಪರಿಪೂರ್ಣ ವ್ಯಕ್ತಿತ್ವ, ಸುಭದ್ರ ಸಮಾಜ, ರಾಜ್ಯ, ರಾಷ್ಟ್ರ ನಿರ್ಮಾಣವಾಗುತ್ತದೆ. ಅಂತಹ ವಿಜ್ಞಾನದ ಕಲಿಕೆ ವಿಜ್ಞಾನದ ಇಂತಹ ಕಾರ್ಯಕ್ರಮಗಳ ಮುಖಾಂತರ ಸಾಧ್ಯವಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಹೇಳಿದರು.

ಸಮೀಪದ ಹುಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ವಿಜ್ಞಾನ ಗೋಷ್ಠಿ ಹಾಗೂ ವಿಜ್ಞಾನ ನಾಟಕಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಗದಗ ಡಯಟ್‌ನ ಉಪನ್ಯಾಸಕ ಜಿ.ಡಿ. ದಾಸರ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನದಂತಹ ವಿಷಯಗಳಲ್ಲಿ ಇಂದು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಎಂದು ಗ್ರಾಮೀಣಗಳಲ್ಲಿ ಹೆಚ್ಚುತ್ತಿದೆ. ಅಂತಹ ಜ್ಞಾನಗಳ ಪರಿಚಯ ಪ್ರೌಢಶಾಲಾ ಹಂತದಲ್ಲಿಯೇ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕೆ.ವೈ. ಮೇಲಿನಮನಿ ಮಾತನಾಡಿ, ಸಮುದಾಯದ ಸಮರ್ಥ ಸಹಭಾಗಿತ್ವವು ಉತ್ತಮ ಶಾಲೆ, ಅತ್ಯುತ್ತಮ ಶೈಕ್ಷಣಿಕ ಪ್ರಗತಿಗೆ ಮುಖ್ಯ ಕಾರಣವಾಗಬಹುದು ಎಂಬುದಕ್ಕೆ ಹುಲ್ಲೂರು ಗ್ರಾಮ ಉತ್ತಮ ಉದಾಹರಣೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಬಿ.ಆರ್.ಪಿ ಈಶ್ವರ ಮೆಡ್ಲೇರಿ ವೈಜ್ಞಾನಿಕ ಮನೋಭಾವ ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ವಿಜ್ಞಾನ ವಿಚಾರಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ತಾಲೂಕಿನಿಂದ ಆಯ್ಕೆಯಾಗಿರುವ ತಂಡಗಳು ರಾಜ್ಯ,ರಾಷ್ಟ್ರ ಹಾಗೂ ಝೋನಲ್ ಹಂತದವರೆಗೆ ಹೋಗಿ ತಾಲೂಕಿಗೆ ಕೀರ್ತಿ ತಂದಿವೆ ಎಂದರು.

ಗ್ರಾಪಂ ಸದಸ್ಯ ಪರಮೇಶ್ವರಗೌಡ ಪಾಟೀಲ, ಗ್ರಾಪಂ ಮಾಜಿ ಉಪಾಧ್ಯಕ್ಷ ಮಾಬುಲಿ ಗಾಡಗೋಳಿ ಮಾತನಾಡಿದರು.

ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ, ಉಪನ್ಯಾಸಕ ರಮೇಶ ರಿತ್ತಿ, ಗ್ರಾಪಂ ಸದಸ್ಯ ಯಲ್ಲಪ್ಪ ನರಸೋಜಿ, ಶೇಖಣ್ಣ ಸಾಸಲವಾಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕ್ರಣ್ಣ ಮಾಗಡಿ, ಅಶೋಕ ಹಾವೇರಿ, ಶಂಕ್ರಣ್ಣ ಮೂಕಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ, ಶಿಕ್ಷಣ ಸಂಯೋಜಕ ಉಮೇಶ ಹುಚ್ಚಯ್ಯನಮಠ, ಸರ್ಕಾರಿ ಪ್ರೌಢಶಾಲೆ ಆದರಹಳ್ಳಿಯ ಮುಖ್ಯೋಪಾಧ್ಯಾಯ ಹರೀಶ.ಎಸ್ ಇದ್ದರು.

ಸಿ.ಆರ್.ಪಿ ಗಿರೀಶ ನೇಕಾರ ಸ್ವಾಗತಿಸಿದರು. ಶಿಕ್ಷಕ ಸಿದ್ದಲಿಂಗೇಶ ಹಲಸೂರ ನಿರೂಪಿಸಿದರು. ಬಿ.ಎಸ್.ಕೊಪ್ಪದ ವಂದಿಸಿದರು.

ನಿರ್ಣಾಯಕರಾಗಿ ಶಿಕ್ಷಕ ಈರಣ್ಣ ಗಾಣಿಗೇರ, ಶೇಖರ ಚಿಕ್ಕಣ್ಣವರ, ಹರೀಶ. ಎಸ್, ನವೀನ ಅಂಗಡಿ ಸ್ಪರ್ಧೆ ನಡೆಸಿಕೊಟ್ಟರು.

ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಪಾಲ್ಗೊಂಡಿದ್ದರು. 20ಕ್ಕೂ ಅಧಿಕ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಗಳ ಫಲಿತಾಂಶ:

ವಿಜ್ಞಾನ ಗೋಷ್ಠಿ ಸ್ಪರ್ಧೆ:

ಪ್ರಥಮ- ಶ್ರಾವ್ಯ ಹಿರೇಮಠ, ವಿದ್ಯಾಪೀಠ ಪಾಠಶಾಲಾ ಲಕ್ಷ್ಮೇಶ್ವರ.

ದ್ವಿತೀಯ- ರೇಣುಕಾ ಮುಶಪ್ಪನವರ, ಸಿ ಸಿ ಎನ್ ಸರ್ಕಾರಿ ಪ್ರೌಢಶಾಲೆ ಶಿರಹಟ್ಟಿ.

ತೃತಿಯ- ವೀಣಾ ವಡ್ಡಟ್ಟಿ, ಕೆಪಿಎಸ್ ಪ್ರೌಢಶಾಲೆ ಬೆಳ್ಳಟ್ಟಿ .

ವಿಜ್ಞಾನ ನಾಟಕ ಸ್ಪರ್ಧೆ:

ಪ್ರಥಮ-ಪ್ರಿಯಾಂಕ ಗುಡಗುಂಟಿ ಹಾಗೂ ಸಂಗಡಿಗರು, ಲಿಟಲ್ ಹಾರ್ಟ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಲಕ್ಷ್ಮೇಶ್ವರ.

ದ್ವಿತೀಯ- ರೀತು ಭರಮರಡ್ಡಿ ಹಾಗೂ ಸಂಗಡಿಗರು,ಕೆಪಿಎಸ್ ಬೆಳ್ಳಟ್ಟಿ.

ತೃತೀಯ- ಸಿಂಚನ ಹಾಗೂ ಸಂಗಡಿಗರು, ಸಿಸಿಎನ್ ಸರ್ಕಾರಿ ಪ್ರೌಢಶಾಲೆ ಶಿರಹಟ್ಟಿ