ಸಾರಾಂಶ
ಮಹಾನಗರದಲ್ಲಿ ಗಾಂಜಾ, ಮದ್ಯ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ಮಟ್ಟ ಹಾಕಬೇಕು, ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕೆಲವು ಪೊಲೀಸರು ಅಪರಾಧ ಚಟುವಟಿಕೆ ಹಿನ್ನೆಲೆ ಹೊಂದಿರುವವರೊಂದಿಗೆ ಕೈಜೋಡಿಸಿರುವುದರಿಂದಾಗಿ ಹು-ಧಾ ಮಹಾನಗರದಲ್ಲಿ ಹತ್ಯೆಯಂತಹ ಪ್ರಕರಣಗಳು ಮರುಕಳಿಸುತ್ತಿವೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.ಭಾನುವಾರ ವೀರಾಪುರ ಓಣಿಯಲ್ಲಿರುವ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪೊಲೀಸ್ ಇಲಾಖೆಯವರು ಅಕ್ರಮ ಚಟುವಟಿಕೆ ಮಾಡುವವರೊಂದಿಗೆ ಶಾಮೀಲಾಗಿ ತಾವು ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು, ರಾಜಕಾರಣಿಗಳಿಗೆ ಲಂಚ ನೀಡಿರುತ್ತಾರೆ. ಆ ಹಣವನ್ನು ಮರಳಿ ಸಂಗ್ರಹಿಸಲು ಅಪರಾಧ ಕೃತ್ಯ ಎಸಗುವವರೊಂದಿಗೆ ಕೈಜೋಡಿಸುತ್ತಾರೆ ಎಂದು ಆರೋಪಿಸಿದರು.ಮಹಾನಗರದಲ್ಲಿ ಗಾಂಜಾ, ಮದ್ಯ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ಮಟ್ಟ ಹಾಕಬೇಕು, ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನು ರಾಜಕಾರಣಿಗಳ ಮಕ್ಕಳೇ ಪೊಲೀಸರೊಂದಿಗೆ ಶಾಮೀಲಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣರಾಗುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪೊಲೀಸರನ್ನು ಅಂತರ್ ಜಿಲ್ಲೆಗೆ ವರ್ಗಾವಣೆ ಮಾಡುವ ಕಾನೂನನ್ನು ಜಾರಿಗೆ ತರಬೇಕು. ಹೀಗಾದಾಗ ಕಾನೂನುಬಾಹಿರ ಚಟುವಟಿಕೆ ಮಟ್ಟಹಾಕಲು ಸಾಧ್ಯವಾಗುತ್ತದೆ ಎಂದರು.ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮುಖಂಡ ಅನೂಪ ಬಿಜವಾಡ ಸೇರಿದಂತೆ ಹಲವರಿದ್ದರು.