ಯಲಬುರ್ಗಾ: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಕಾರ್ಯಕ್ರಮವಾದ ಪ್ರಗತಿ ಪಥ ಯೋಜನೆಯಡಿ ಕ್ಷೇತ್ರದ ೧೭ ಹಳ್ಳಿಗಳನ್ನು ಸಂಪರ್ಕಿಸುವ ೩೦ ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹೨೨ ಕೋಟಿ ಅನುದಾನ ಮಂಜೂರಾಗಿದೆ.
ಪ್ರಗತಿಪಥ ಯೋಜನೆಯು ಗ್ರಾಮೀಣ ರಸ್ತೆ ಜಾಲ ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಸುಧಾರಿಸುವ ಉದ್ದೇಶವಾಗಿದೆ. ಶಾಸಕ ಬಸವರಾಜ ರಾಯರಡ್ಡಿ ಮನವಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ.೩೦ ಕಿಮೀ ರಸ್ತೆ ಅಭಿವೃದ್ಧಿ: ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಪಡಿಸಲು ಶಾಸಕ ಬಸವರಾಜ ರಾಯರಡ್ಡಿ ಕಾಳಜಿ ವಹಿಸಿದ್ದು, ಇದರ ಫಲವಾಗಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ೧೭ಗ್ರಾಮಗಳ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ತಾಲೂಕಿನ ಹಿರೇಮ್ಯಾಗೇರಿ-ಚಿಲಝೆರಿ ೩ಕಿಮೀ ರಸ್ತೆ ನಿರ್ಮಾಣಕ್ಕೆ (₹೩.೨೭ಕೋಟಿ), ಬಂಡಿ-ಕಡಬಲಕಟ್ಟಿ-ಬನ್ನಿಗೋಳ ೮ ಕಿಮೀ ರಸ್ತೆ ನಿರ್ಮಾಣಕ್ಕೆ ₹೫.೪೫ ಕೋಟಿ, ಕುಕನೂರು-ಗೊರ್ಲೆಕೊಪ್ಪ-ಮಂಡಲಗೇರಿ ೪ ಕಿಮೀಗೆ ₹೨.೮೮ ಕೋಟಿ, ವಜ್ರಬಂಡಿ-ಸಾಲಭಾವಿ-ಮಕ್ಕಳ್ಳಿ ೩ ಕಿಮೀಗೆ ₹೧.೯೧ ಕೋಟಿ, ಗಾಣಧಾಳ-ಕಟಗಿಹಳ್ಳಿ ೪.೮೦ ಕಿ.ಮೀ ₹೨.೪೪ ಕೋಟಿ, ರ್ಯಾವಣಕಿ-ಬೇವೂರು ಕ್ರಾಸ್ ೪.೫೧ ಕಿಮೀ ₹೩.೯೦ ಕೋಟಿ, ಬಳಗೇರಿ-ಯಡಿಯಾಪುರ ೨.೮೩ ಕಿಮೀ ₹೨.೧೩ ಕೋಟಿ ಸೇರಿ ಒಟ್ಟು ೩೧ಕಿಮೀ ರಸ್ತೆಗೆ ಅಂದಾಜು ₹೨೨ ಕೋಟಿ ಅನುದಾನ ಮಂಜೂರಾಗಿದೆ.
ವಿಶೇಷವಾಗಿ ಸೇವೆಯಿಂದ ವಂಚಿವಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಾಹನ ಸವಾರರು, ರೈತರ ಕೃಷಿ ಚಟುವಟಿಕೆಗೆ ಸುಲಭವಾಗಿ ಸಂಚರಿಸಲು ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಗತಿಪಥ ಯೋಜನೆ ಅನುಷ್ಠಾನಗೊಂಡಿದೆ. ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಇದೇ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ಕ್ಷೇತ್ರದ ಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಸುಗಮ ಸಂಚಾರಕ್ಕೆ ಸಾಕ್ಷಿಯಾಗಿವೆ. ಜಿಲ್ಲೆ ಮತ್ತು ಪಕ್ಕದ ಬೇರೆ ಬೇರೆ ತಾಲೂಕಿಗೆ ಹೋಲಿಸಿದರೆ ಕ್ಷೇತ್ರದ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಯಲಬುರ್ಗಾ ಕ್ಷೇತ್ರದ ಜನರು ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಮೀಣ ರಸ್ತೆ ನಿರ್ಮಿಸಲಾಗುತ್ತಿದೆ. ಅಂದಾಜು ₹೨೨ ಕೋಟಿ ವೆಚ್ಚದಲ್ಲಿ ೩೦ ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.