ಮಂಗಳೂರು: ಪತ್ರಕರ್ತರು ಸಮಾಜಕ್ಕೆ ಕನ್ನಡಿ ಹಿಡಿದು, ಜಾಗೃತಿ ಮೂಡಿಸಿ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಕನ್ನಡಿ ಹಿಡಿಯುವವರು ಯಾರು? ಅವರ ಕರ್ತವ್ಯ, ಸೇವೆ, ನೋವು, ನಲಿವುಗಳಿಗೆ ಸ್ಪಂದಿಸುವ ಕೆಲಸ ಹಾಗೂ ಪತ್ರಕರ್ತರನ್ನು ಅರ್ಥ ಮಾಡಿಕೊಳ್ಳುವ ಕೆಲಸವನ್ನು ಸಮಾಜ ಮಾಡಬೇಕು ಎಂದು ಅನುಪಮ ಮಾಸಿಕದ ಪ್ರಧಾನ ಸಂಪಾದಕಿ, ಹಿರಿಯ ಸಾಹಿತಿ ಶಹನಾಝ್ ಎಂ. ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಂಗಳೂರು ಪ್ರೆಸ್ ಕ್ಲಬ್ ಹೊರತರುವ ‘ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ’ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿಂದೆ ಪತ್ರಕರ್ತರು ತಮ್ಮ ಕರ್ತವ್ಯಕ್ಕೆ ಮಾತ್ರ ಸೀಮಿತರಾಗಿದ್ದರು. ದಕ್ಷಿಣ ಕನ್ನಡದ ಪತ್ರಕರ್ತರು ವೃತ್ತಿ ಜತೆಗೆ, ಹಲವಾರು ಸಮಾಜಸೇವಾ ಕಾರ್ಯ ಕೂಡಾ ಮಾಡುತ್ತಿದ್ದಾರೆ. ಅವರ ಕಾರ್ಯಚಟುವಟಿಕೆ, ಸಾಧನೆ, ನೋವು, ನಲಿವುಗಳು ಸಮಾಜಕ್ಕೆ ತಿಳಿಯಬೇಕು. ‘ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ’ ಪತ್ರಿಕೆ ಜನರಿಗೂ ತಲುಪಲಿ ಎಂದು ಅವರು ಆಶಿಸಿದರು.
ಮಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಇದ್ದರು.ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.