ಮಂಗಳೂರು: ಇವತ್ತಿನ ಜೆನ್ ಜೀ ನಾಮಾಂಕಿತ ತಲೆಮಾರಿನ ಮಕ್ಕಳಿಗೆ ಪುಸ್ತಕ ಓದಿನ ಬಗ್ಗೆ ಅಭಿರುಚಿ ಮೂಡಿಸುವ ಕೆಲಸಗಳು ನಡೆಯಬೇಕು. ಹೊಸ ತಲೆಮಾರಿನ ಮಕ್ಕಳು ಮೊಬೈಲ್ ಗ್ಯಾಜೆಟ್ ಗೆ ಅತೀಯಾಗಿ ಅವಲಂಬಿತರಾಗುವುದನ್ನು ಬಿಡಿಸಿ ಅವರ ಜ್ಞಾನ ಭಂಡಾರ ವೃದ್ಧಿಸುವ ಓದಿನತ್ತ ಗಮನ ಕೇಂದ್ರೀಕರಿಸುವ ಕೆಲಸ ನಡೆಯಬೇಕಿದೆ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಬಿ.ಜನರ್ದನ ಭಟ್ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ಬಲೆ ತುಳು ಓದುಗ ಅಭಿಯಾನದ೧೩ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತುಳು ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆ. ಕ್ರಿಸ್ತಪೂರ್ವ ಕಾಲದ ಅಶೋಕನ ಶಾಸನಗಳಲ್ಲಿ ತುಳುವಿನ ಬಗ್ಗೆ ಉಲ್ಲೇಖವಿದೆ. ಓದಿನ ಮೂಲಕ ವಿದ್ಯಾರ್ಥಿಗಳು ತುಳುವಿನ ಬಗ್ಗೆ ಹೆಚ್ಚಿನ ಅನುಭವ, ಜ್ಞಾನ ಪಡೆಯುವಂತಾಗಲಿ ಎಂದರು.
ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾರ್ದಿಕ್ ಚೌಹಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ತುಳು ಅಕಾಡೆಮಿಗೆ ಭೇಟಿಯ ಈ ಕಾರ್ಯಕ್ರಮ ವಿಶಿಷ್ಟ ಅನುಭವ ಹಾಗೂ ಹೆಚ್ಚಿನ ಜ್ಞಾನ ನೀಡಲಿದೆ ಎಂದು ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಸಾಹಿತ್ಯ ಲೋಕದ ಪರಿಚಯಿಸುವ ಸಲುವಾಗಿ ಅಕಾಡೆಮಿಯಲ್ಲಿ ಬಲೆ ತುಳು ಓದುಗ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ಎಸ್.ಸಿ.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಚಿತ್ರಾ ಪಿ.ಶೆಟ್ಟಿ, ತುಳು ಸಂಘದ ಸಂಚಾಲಕಿ ದೀಕ್ಷಿತಾ, ವಿದ್ಯಾರ್ಥಿ ಸಂಚಾಲಕ ಸುಹಾನ್ ಇದ್ದರು.