ವೈ.ಎಸ್.ವಿ. ದತ್ತ । ಹಿರಿಯ ಸಹೋದರಿ ದಿ. ವಿಜಯಲಕ್ಷೀ ಅವರ ಸ್ಮರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಡೂರುಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣ ಅಡಿಪಾಯ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು. ಶುಕ್ರವಾರ ತಾಲೂಕಿನ ಯಗಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಹಿರಿಯ ಸಹೋದರಿ ದಿ. ವಿಜಯಲಕ್ಷೀ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪರಿಕರ ವಿತರಿಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಮತ್ತಷ್ಟು ಸಬಲೀಕರಣವಾಗಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯವಾಗಿ ಕಲಿಕಾ ಗುಣಮಟ್ಟ ದಲ್ಲಿ ಸುಧಾರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ.ಈಗಾಗಲೇ ಸರ್ಕಾರಿ ರಂಗದ ಶಾಲಾ ಕಾಲೇಜುಗಳಲ್ಲಿ ಕಲಿತು ಸಾಮಾಜಿಕವಾಗಿ ಅತ್ಯುನ್ನತ ಸ್ಥಾನ ಗಳಿಸಿರುವ ಅನೇಕ ನಿದರ್ಶನಗಳಿವೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯರ ನಿರಾಸಕ್ತಿ ಫಲವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಹಿನ್ನಡೆ ಕಂಡು ಬರುತ್ತಿರುವುದು ವಿಷಾದದ ಸಂಗತಿ ಎಂದ ಅವರು, ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಸರ್ಕಾರಿ ಶಾಲೆಗಳು ವರದಾನವಾಗಿದೆ. ಪೋಷಕರಲ್ಲಿ ಅತಿಯಾದ ಆಂಗ್ಲ ವ್ಯಾಮೋಹ ಇದಕ್ಕೆ ಪೂರಕ ಕಾರಣ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಹಿರಿಯ ಸಹೋದರಿ ದಿ. ವಿಜಯಲಕ್ಷೀ ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ಈ ಶಾಲೆಯ 101 ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪರಿಕರ ವಿತರಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದೊಡ್ಡಯ್ಯ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಶಾಲೆ ಮುಖ್ಯಶಿಕ್ಷಕ ಮಂಜುನಾಥ, ಶಿಕ್ಷಕರಾದ ಮಂಜುಳಾ, ಗಿರಿಜಮ್ಮ, ವೈ.ಎಸ್. ರವಿಪ್ರಕಾಶ್, ಡಿ.ಪ್ರಶಾಂತ, ರಾಜಲಕ್ಷೀ, ಪದ್ಮಜಾ, ಮೋಹನ್ಕುಮಾರ್, ಗಣೇಶ್ ಸೇರಿದಂತೆ ಗ್ರಾಮದ ಗೌಡರುಗಳು ಇದ್ದರು.
17ಕೆಕೆಡಿಯು2. ಕಡೂರು ತಾಲೂಕಿನ ಯಗಟಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಶಾಲಾ ಬ್ಯಾಗ್ ಮತ್ತು ಪಠ್ಯ ಪರಿಕರ ವಿತರಿಸಿದರು. ಬಿದರೆ ಜಗದೀಶ್, ರವಿಪ್ರಕಾಶ್, ಡಿ.ಪ್ರಶಾಂತ್ ದೊಡ್ಡಯ್ಯ, ಮಂಜುನಾಥ್ ಮತ್ತಿತರಿದ್ದರು.