ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಮ್ಮೆಲ್ಲರ ಮಹತ್ತರವಾದ ಜವಾಬ್ದಾರಿಯಾಗಿದೆ ಎಂದು ಕೆ.ವಿ. ಮತ್ತು ಪಂಚಗಿರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಹಾಗೂ ಬಾಸ್ ಬ್ಯಾಚ್ ನ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹೇಳಿದರು.

ತಾಲ್ಲೂಕಿನ ಉದಯಗಿರಿ ನಲ್ಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಬಳ್ಳಾಪುರದ ಬ್ಯಾಚ್ ಆಫ್ ಸೋಶಿಯಲ್ ಸರ್ವಿಸ್(ಬಾಸ್) ಸಂಸ್ಥೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಮತ್ತು ಟ್ರಾಕ್ ಸೂಟ್ ವಿತರಿಸಿ ಮಾತನಾಡಿದರು.

ಪ್ರಾಥಮಿಕ ಶಾಲೆಗಳಿರುವ ಗ್ರಾಮಗಳೇ ನಮ್ಮ ಸಂಸ್ಕೃತಿಯ ಮೂಲ. ಸಂಸ್ಕಾರ ಬಾಲ್ಯದಿಂದಲೇ ಬೆಳೆದು ಬರಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆದು ಬರಲು, ಮಕ್ಕಳಲ್ಲಿ ಶಿಸ್ತು ಶಾಂತಿ ಸಹನೆ ಪರೋಪಕಾರ ಮೊದಲಾದ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಶಾಲೆ ಬಿಟ್ಟ, ಕೂಲಿ ಕೆಲಸ ಮಾಡುವ ಹಾಗೂ ಅಸಹಾಯಕ ಮಕ್ಕಳನ್ನು ಗುರುತಿಸಿದಲ್ಲಿ ಅವರ ಶಿಕ್ಷಣಕ್ಕೆ ಭೇಕಾದ ನೆರವನ್ನು ನಮ್ಮ ಬ್ಯಾಚ್ ಆಫ್ ಸೋಶಿಯಲ್ ಸರ್ವಿಸ್(ಬಾಸ್) ಸಂಸ್ಥೆಯ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಲಿಕೆಗೆ ಒತ್ತಡ ಹೇರಬೇಡಿ


ಕೆ.ವೆಂಕಟಪತೆಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ವೆಂಕಟೇಶ್ ಮಾತನಾಡಿ, ಮಕ್ಕಳಿಗೆ ಕಲಿಕೆ ಎನ್ನುವುದು ಆನಂದವಾಗಿರಬೇಕೆ ವಿನಃ ಒತ್ತಡವಾಗಿರಬಾರದು. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳನ್ನು ಸಮನಾಗಿ ಆಯೋಜನೆ ಮಾಡಬೇಕು. ಇದರಿಂದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಬಾಸ್ ಸಂಸ್ಥೆಯ ಅಧಿಕಾರಿ ಬಿ.ಮಹೇಶ್, ಪದಾಧಿಕಾರಿಗಳಾದ ಸುಬ್ರಹ್ಮಣ್ಯಂ, ಪ್ರವೀಣ್, ನಾಗಮೋಹನ್, ನಾಗರಾಜ ನಾಯ್ಡು ,ಹರೀಶ್ ,ಚಂದ್ರಕಾಂತ್, ಮಹಾಂತೇಶ್, ಮಧು ,ಅಸ್ಲಾಂ , ಶಾಲೆಯ ಶಿಕ್ಷಕ ಮಧು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.