ಬೆಳಗಾವಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ವತಿಯಿಂದ ಆಯೋಜಿಸಿದ್ದ ಬೆಳಗಾವಿ ಸರಸ್ ಮೇಳದಲ್ಲಿ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಎಲ್ಲರ ಗಮನ ಸೆಳೆದವು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಳಗಾವಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ವತಿಯಿಂದ ಆಯೋಜಿಸಿದ್ದ ಬೆಳಗಾವಿ ಸರಸ್ ಮೇಳದಲ್ಲಿ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಎಲ್ಲರ ಗಮನ ಸೆಳೆದವು.ಬೆಳಗಾವಿಯ ಸರ್ದಾರ್ ಆಟದ ಮೈದಾನದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ಬೆಳಗಾವಿ ಇವರ ಸಹಯೋಗದಲ್ಲಿ ಡಿ.12 ರಿಂದ 21ರವರೆಗೆ ಹಮ್ಮಿಕೊಂಡ ರಾಜ್ಯ ಮಟ್ಟದ ಬೆಳಗಾವಿ ಸರಸ್ ಮೇಳದಲ್ಲಿ ಜಿಲ್ಲೆಯ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ಪರಿಸರ ಸ್ನೇಹಿ ಜೂಟ್ ಬ್ಯಾಗ್ಗಳು, ಆಕರ್ಷಕ ಪ್ರಸಿದ್ಧ ಇಳಕಲ್ಲ ಸೀರೆಗಳು ಹಾಗೂ ಆರೋಗ್ಯಕರ ನೈಸರ್ಗಿಕ ವಸ್ತುಗಳು ಜನರ ಗಮನ ಸೆಳೆದವು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಸ್ನೇಹಲ್ ಆರ್. ಅವರು ಬಾಗಲಕೋಟೆ ಜಿಲ್ಲೆಯ ಮಹಿಳಾ ಸ್ವ-ಸಹಾಯ ಗುಂಪುಗಳಾದ ಸುಳೇಭಾವಿಯ ಶ್ರೀ ರೇವಣಸಿದ್ದೇಶ್ವರ ಸ್ತ್ರೀ ಶಕ್ತಿ ಮಹಿಳಾ ಸಂಘ ಹಾಗೂ ಇಳಕಲ್ಲಿನ ಶ್ರೀ ರಾಮಲಿಂಗೇಶ್ವರ ಮಹಿಳಾ ಸ್ತ್ರೀ ಶಕ್ತಿ ಸಂಘಗಳು ಸ್ಥಾಪಿಸಿದ ಮಳಿಗೆಗೆ ಭೇಟಿ ನೀಡಿ ಕೈ ಮಗ್ಗದಿಂದ ತಯಾರಿಸಿದ ಇಳಕಲ್ ಸೀರೆಗಳ ಗುಣಮಟ್ಟ, ಗ್ರಾಮೀಣ ಭಾಗದ ಸೊಗಡನ್ನು ಮುಂದುವರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸೈದಾಪುರದ ಶ್ರೀ ವರಮಹಾಲಕ್ಷ್ಮಿ ಸಂಜೀವಿನಿ ಮಹಿಳಾ ಸ್ವ-ಸಹಾಯ ಗುಂಪು ತಯಾರಿಸಿದ ಸಾವಯವ ಉತ್ಪನ್ನಗಳಾದ ಶುದ್ಧ ಗಾಣದ ಎಣ್ಣೆ, ನುಗ್ಗೆ ಸೊಪ್ಪಿನ ಪೌಡರ್, ಬೆಟ್ಟದ ನೆಲ್ಲಿಕಾಯಿಯ ಚೂರ್ಣ, ಬೇವಿನ ಸೊಪ್ಪು, ಕಡಲೆ ಹಿಟ್ಟು ಲೋಳಸಾರಗಳಿಂದ ತಯಾರಿಸಲ್ಪಟ್ಟಿರುವ ಸಾಬೂನು ಖರೀದಿಸಿ, ನುಗ್ಗೆ ಸೊಪ್ಪಿನ ಕಷಾಯಿ ಸವಿದರು. ವಿವಿಧ ರೀತಿಯ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸುವಂತೆ ಮಾರ್ಗದರ್ಶನ ನೀಡಿದರು.
ಜಿಲ್ಲೆಯಿಂದ ನಿಯೋಜನೆಗೊಂಡಿದ್ದ ಅಡಿವೇಶ ಧೂಪದ, ಜಯಶ್ರೀ ಮುಂಗಲಿ ಸಂಜೀವಿನಿ ಯೋಜನೆಯಿಂದ ಸೌಲಭ್ಯ ಪಡೆದು ಜೀವನೋಪಾಯ ಚಟುವಟಿಕೆ ಕೈಗೊಂಡ ಸ್ವಾವಲಂಬಿ ಜೀವನ ನಡೆಸುತ್ತಿರುವ ಬಗ್ಗೆ ಅಭಿಯಾನ ನಿರ್ದೇಶಕರಿಗೆ ತಿಳಿಸಿದರು. ಸ್ವಸಹಾಯ ಗುಂಪುಗಳ ಮಹಿಳೆಯರು ತೋರಿದ ಶ್ರಮ, ಸೃಜನಶೀಲತೆ ಹಾಗೂ ಸ್ವಾವಲಂಬನೆಯ ಪ್ರಯತ್ನವನ್ನು ಶ್ಲಾಘಿಸಿ ಇಂತಹ ಮೇಳಗಳು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸೂಕ್ತ ವೇದಿಕೆ ಆಗಿದೆ ಎಂದು ತಿಳಿಸಿದರು. ಬೆಳಗಾವಿ ವಿಭಾಗದ ಆಯುಕ್ತರಾದ ಜಾನಕಿ ಕೆ.ಎಂ ಅವರು ಸಹ ಮಳಿಗೆಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.