ಸಾರಾಂಶ
ಪ್ರಸ್ತಾವನೆ ರದ್ದುಪಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಹಿರೇಬೆಣಕಲ್ ವ್ಯಾಪ್ತಿಯಲ್ಲಿ ವಿದ್ಯುತ್ ಅಣು ಸ್ಥಾವರ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಸಿಐಟಿಯು ಜಿಲ್ಲಾ ಅಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ತಾಲೂಕಿನ ಹಿರೇಬೆಣಕಲ್ ಮತ್ತು ಚಿಕ್ಕ ಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಜಿಲ್ಲೆಯಲ್ಲಿ ಅವಶ್ಯವಿರುವ ಸುಮಾರು 1200 ಎಕರೆ ಭೂಮಿಯನ್ನು ಗುರುತಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಜಾಗ ಗುರುತಿಸಿರುವ ಮಾಹಿತಿ ಹೊರ ಬಿದ್ದಿರುವುದರಿಂದ ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳ ಜನತೆಯಲ್ಲಿ ಆತಂಕ ವ್ಯಕ್ತವಾಗಿದ್ದು, ಅಣು ಸ್ಥಾವರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ಹಿರೇಬೆಣಕಲ್ ಸುತ್ತ ಅಣು ಸ್ಥಾವರ ಸ್ಥಾಪನೆ ಮಾಡಬಾರದು. ಈ ಪ್ರದೇಶದಲ್ಲಿ ಐತಿಹಾಸಿಕ ಸ್ಮಾರಕ ಮತ್ತು ಬೆಟ್ಟ ಗುಡ್ಡಗಳು ನೈಸರ್ಗಿಕ ಪರಿಸರ ಇದೆ. ಇಲ್ಲಿಯಿಂದ ಕೇವಲ 20 ಕಿಮೀ ಒಳಗೆ ಅಂಜನಾದ್ರಿ ಪರ್ವತ, ಕುಮಾರ ರಾಮನ ಇತಿಹಾಸ, ಬೆಣಕಲ್ ಗ್ರಾಮ 3 ಸಾವಿರ ವರ್ಷಗಳ ಹಿಂದಿನ ಮೋರೇರ ಶಿಲಾಶಾಸನಗಳು ಇದ್ದು, ಮುಂದಿನ ಪೀಳಿಗೆಗೆ ಇದರ ಇತಿಹಾಸ ಮತ್ತು ಪೌರಾಣಿಕ ಸಾಂಸ್ಕೃತಿಕ ಪರಿಚಯ ಮಾಡಿಸಬೇಕಾಗಿರುವುದರಿಂದ ಈ ಭಾಗ ಅಣುಸ್ಥಾವರ ಮಾಡುವುದಕ್ಕೆ ಸೂಕ್ತವಾದ ಜಾಗ ಅಲ್ಲ.ಕೂಡಲೇ ಜಿಲ್ಲಾಧಿಕಾರಿ ಈ ಪ್ರಸ್ತಾವನೆಯನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಬೆಣಕಲ್, ತಾಲೂಕು ಕಾರ್ಯದರ್ಶಿ ಶ್ರೀನಿವಾಸ್ ಹೊಸಹಳ್ಳಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಮರಿನಾಗಪ್ಪ ಡಗ್ಗಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಮರಕುಂಬಿ, ಜಿಲ್ಲಾ ಸಹ ಕಾರ್ಯದರ್ಶಿ ಹುಸನೇಪ್ಪ, ಸಿಐಟಿಯು ತಾಲೂಕು ಕಾರ್ಯದರ್ಶಿ ಮಂಜುನಾಥ ಡಗ್ಗಿ, ಕೆಪಿಆರ್ಎಸ್ ತಾಲೂಕು ಉಪಾಧ್ಯಕ್ಷ ಮುತ್ತಣ್ಣ ದಾಸನಾಳ, ದುರಗಪ್ಪ, ಹನುಮೇಶ ಬೆಣಕಲ್, ಅಮ್ಮಿನಾ ಬೇಗಂ, ದುರಗಮ್ಮ, ಮುದಕಮ್ಮ, ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ ಸೇರಿದಂತೆ ಇತರರು ಭಾಗವಹಿಸಿದ್ದರು.