ಸಾರಾಂಶ
ಮೀನಾ ಹತ್ಯೆ ಖಂಡನೀಯ. ಸಮಾಜ ಎತ್ತ ಸಾಗುತ್ತಿದೆ ಎಂಬುವುದು ಬೇಸರದ ಸಂಗತಿ. ಈ ಹಿಂದೆ ನೇಹಾ ಹಿರೇಮಠ ಹತ್ಯೆಯೂ ಇದೇ ರೀತಿಯಾಗಿತ್ತು.
ಹುಬ್ಬಳ್ಳಿ:
ಕೊಡಗು ಜಿಲ್ಲೆಯಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾ ಹತ್ಯೆ ಖಂಡಿಸಿ ಹಾಗೂ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಹಿಂದ ಸಂಘಟನೆ ಧಾರವಾಡ ಜಿಲ್ಲಾ ಹಾಗೂ ಹು-ಧಾ ಮಹಾನಗರ ಘಟಕ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.ಇಲ್ಲಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ 30ಕ್ಕೂ ಹೆಚ್ಚು ಪ್ರತಿಭಟನಾಕಾರರು ವಿದ್ಯಾರ್ಥಿ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಘೋಷಣೆ ಕೂಗಿದರು.
ಸಂಘಟನೆ ಸದಸ್ಯ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಮೀನಾ ಹತ್ಯೆ ಖಂಡನೀಯ. ಸಮಾಜ ಎತ್ತ ಸಾಗುತ್ತಿದೆ ಎಂಬುವುದು ಬೇಸರದ ಸಂಗತಿ. ಈ ಹಿಂದೆ ನೇಹಾ ಹಿರೇಮಠ ಹತ್ಯೆಯೂ ಇದೇ ರೀತಿಯಾಗಿತ್ತು. ಆಗ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರಿಗೆ ಮೀನಾ ಹತ್ಯೆ ಕಣ್ಣಿಗೆ ಏಕೆ ಕಾಣುತ್ತಿಲ್ಲ ಎಂದು ಹರಿಹಾಯ್ದರು. ಹಿಂದೂ ಸಂಘಟನೆಗಳು ಮಲಗಿಕೊಂಡಿವೆಯೇ ಎಂದು ಪ್ರಶ್ನಿಸಿದ ಅವರು, ಮೀನಾ ಹತ್ಯೆ ವಿಚಾರದಲ್ಲಿಯೂ ಪ್ರತಿಭಟನೆ ನಡೆಸಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.ಅಹಿಂದ ಸಂಘಟನೆಯ ಧಾರವಾಡ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಾತನಾಡಿ, ಮೀನಾ ಸಹ ಭಾರತೀಯಳಾಗಿದ್ದಾಳೆ. ಇವಳ ಸಾವು ಬಿಜೆಪಿಗೆ ಏಕೆ ಕಾಣುತ್ತಿಲ್ಲ. ಮುಸ್ಲಿಂ ಯುವಕ ಕೊಲೆ ಮಾಡಿದರೆ ಮಾತ್ರ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ಕಿಡಿಕಾರಿದರು. ಈಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಪ್ರಕರಣಕ್ಕೂ ತ್ವರಿತ ನ್ಯಾಯಾಲಯ ಸ್ಥಾಪಿಸಿ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಬಾಬಾಜಾನ್ ಮುಧೋಳ, ಯೂಸೂಫ್ ಬಳ್ಳಾರಿ, ಬಿ.ಎ. ಮುಧೋಳ ಇದ್ದರು.