ಕನ್ನಡಪ್ರಭ ವಾರ್ತೆ ಅಥಣಿ

ಕೃಷ್ಣ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ ಕೂಡ ಕರಿಮಸೂತಿ, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗಳ ಕೆನಾಲ್‌ಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿರುವ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಮಹೇಶ ಕುಮಠಳ್ಳಿ ನೇತೃತ್ವದಲ್ಲಿ ನೂರಾರು ರೈತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಕಾಲುವೆಗಳಿಗೆ ಸತತವಾಗಿ ನೀರು ಬಿಡಿ, ಕಾಟಾಚಾರಕ್ಕೆ ಕಾಲುವೆಗಳಿಗೆ ನೀರು ಬಿಟ್ಟು ನಂತರ ನೀರು ನಿಲ್ಲಿಸಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು, ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಗೊತ್ತಾದ ನಂತರ ರಾತ್ರಿ ನೀರು ಬಿಟ್ಟಿದ್ದೀರಿ ಒಳ್ಳೆಯದು. ಆದರೆ ಪ್ರತಿಭಟನೆಯ ನಂತರ ಮತ್ತೆ ಕಾಲುವೆಗೆ ನೀರು ನಿಲ್ಲಿಸಿದರೆ ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳಹರಿವು ಇದ್ದರೂ ಕೂಡ ಏಕಾಏಕಿ ಕೆನಾಲ್‌ಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿರುವುದು ರೈತರ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಿದೆ. ನಮ್ಮ ಪ್ರತಿಭಟನೆಗೆ ಮಣಿದು ಶುಕ್ರವಾರ ರಾತ್ರಿಯೇ ಕೆನಾಲ್ ಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದಾರೆ. ಒಂದು ವೇಳೆ ಮತ್ತೊಮ್ಮೆ ಕುಂಟು ನೆಪ ಹೇಳಿ ನೀರು ಹರಿಸುವುದನ್ನು ನಿಲ್ಲಿಸಿದಲ್ಲಿ ರೈತರೊಂದಿಗೆ ಜಾಕ್ ವೆಲ್‌ಗೆ ತೆರಳಿ ನೀರು ಹರಿಸುತ್ತೇವೆ ಎಂದು ಎಚ್ಚರಿಸಿದರು.ಜಿಪಂ ಮಾಜಿ ಸದಸ್ಯ ಎಸ್.ಎ.ಮುದುಕಣ್ಣವರ, ಬಿಜೆಪಿ ಮುಖಂಡ ಸತ್ಯಪ್ಪ ಭಾಗಣ್ಣವರ, ಅರುಣ ಗಣೇಶ್ವವಾಡಿ, ನಿಂಗಪ್ಪ ನಂದೇಶ್ವರ, ಸಂಪತ್ತಕುಮಾರ ಶೆಟ್ಟಿ, ಗುರಪ್ಪ ಮಗದುಮ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ಅಶೋಕ ಯಲಡಗಿ, ರವಿ ಪೂಜಾರಿ, ಸಂತೋಪ ಕಕಮರಿ, ಮಲ್ಲಿಕಾರ್ಜುನ ಅಂದಾನಿ, ನಾನಾಸಾಬ ಅವತಾಡೆ, ನಿಶಾಂತ ದಳವಾಯಿ, ಗುರು ಆಜೂರ, ಪ್ರಕಾಶ ಮೋರೆ, ಅಪ್ಪು ಮೋಕಾಶಿ, ಅಜೀತ ಪವಾರ, ಬಾಳು ಮಗದುಮ್, ಮಲ್ಲಿಕಾರ್ಜುನ ಕೆಂಪಿ, ಬಾಹುಬಲ್ಲಿ ಬುಜಾಪಗೋಳ, ಮುತ್ತಣ್ಣಾ ಸಂತಿ, ಶಿವು ಸಿಂದೂರ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.