ಕನ್ನಡಪ್ರಭ ವಾರ್ತೆ ಯರಗಟ್ಟಿ

ಬಸ್‌ಗಳಲ್ಲಿ ಪಾಸ್ ಹೊಂದಿದವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತಲ್ಲೂರು ನಿಲ್ದಾಣದಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

ಸಮೀಪದ ತಲ್ಲೂರ ಗ್ರಾಮದಿಂದ ಸುಬ್ಬಾಪೂರ, ರಾಮಾಪೂರ ಹಾಗೂ ಯರಗಟ್ಟಿ ಎರಡು ಮಾರ್ಗವಾಗಿ ಬೈಲಹೊಂಗಲಕ್ಕೆ ಸಂಚರಿಸುವ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಸವದತ್ತಿ ಘಟಕದ ಬಸ್‌ ಬೈಲಹೊಂಗಲದ ಶಾಲಾ ಕಾಲೇಜುಗಳಿಗೆ ಸಂಚರಿಸುತ್ತಾರೆ. ಸವದತ್ತಿ ಘಟಕದ ಕೆಲ ನಿರ್ವಾಹಕರು ವಿದ್ಯಾರ್ಥಿಗಳ ಬಸ್ ಪಾಸ್‌ಗೆ ಅವಕಾಶ ಕೊಡುತ್ತಿಲ್ಲ ಎಂದು ಹೇಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಎರಡು ಮಾರ್ಗದಲ್ಲಿ ಸಂಚರಿಸಲು ಮೇಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಿಂದ ಗ್ರಾಮದಲ್ಲಿ ಕೆಲಹೊತ್ತು ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಯರಗಟ್ಟಿ ಪಿಎಸ್‌ಐ ಎಲ್.ಬಿ.ಮಾಳಿ ವಿದ್ಯಾರ್ಥಿಗಳ ಮನವೊಲಿಸಿ ಅಧಿಕಾರಿಗಳ ಜೊತೆ ಮಾತನಾಡಿ, ಒಂದೇ ವಾರದಲ್ಲಿ ಸಂಚರಿಸಲು ಮುಕ್ತ ಅವಕಾಶ ಕೊಡಲಾಗುವುದೆಂದು ತಿಳಿಸಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡಿದರು.

ಪ್ರಕಾಶ ನಾಗನೂರ, ಪ್ರವೀಣ ಮಲ್ಲೂರ, ನವೀನ ಬೆನಕಟ್ಟಿ, ಹನಮಂತ ಉಪ್ಪಾರ, ಸುಪ್ರೀತ ಅಣ್ಣಿಗೇರಿ, ಬಸವರಾಜ ಕೊಪ್ಪದ, ಕಾರ್ತಿಕ ಸುಬಾನವರ, ಮಹಾಂತೇಶ ಉಪ್ಪಿನ, ಸಚಿನ ಕಲ್ಲನವರ, ಯಶವಂತ ಹೊಸುರ, ಸಂದೀಪ ಶೀಲವಂತರ, ಪ್ರವೀಣ ಮುರಗೋಡ, ಬಾಬು ಬಾನದಾರ, ಶಿವಾನಂದ ಬೈಲವಾಡ, ಸಿದ್ದಾರ್ಥ ನಡುವಿನ ಮನಿ, ಚೇತನ ಕಲ್ಲನ್ನವರ, ಭರತ ನಡುವಿನಮನಿ ಮತ್ತಿತರಿದ್ದರು.


ಯರಗಟ್ಟಿ ಮಾರ್ಗದ ಬಸ್ ಪಾಸ್‌ಗಳನ್ನು ರಾಮಾಪೂರ ಮಾರ್ಗವಾಗಿ ವಿದ್ಯಾರ್ಥಿಗಳು ಬದಲಾವಣೆ ಮಾಡಿಕೊಳ್ಳಬೇಕು. ಈಗಾಗಲೇ ಬೈಲಹೊಂಗಲ ಸಾರಿಗೆ ಅಧಿಕಾರಿಗಳಿಗೆ ಮಾರ್ಗ ಬದಲಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಡಿಟಿಒ ಧಾರವಾಡ ಸಂತೋಷ ಕಮತ ತಿಳಿಸಿದ್ದಾರೆ.