ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಒದಗಿಸಬೇಕು ಎಂದು ಆಗ್ರಹಿಸಿ ಇಲ್ಲಿಯ ಪಾಲಿಕೆ ಕಚೇರಿ ಎದುರು ಮೂರನೇ ದಿನವೂ ತರಹೇವಾರಿ ಹೋರಾಟಗಳು ಮುಂದುವರಿದಿವೆ.

ಈ ಹೋರಾಟದಲ್ಲಿ ಭಾನುವಾರ ತಮಟೆ ಚಳವಳಿ, ರಸ್ತೆ ಬಂದ್‌ ಹಾಗೂ ಬಿಜೆಪಿ ಮುಖಂಡರ ಭಾವಚಿತ್ರ ಸುಟ್ಟು ಹೋರಾಟಗಾರರು ಬಿಸಿ ಮುಟ್ಟಿಸಿದರು. ಬಿಜೆಪಿ ನಾಯಕರ ಒತ್ತಡದಿಂದಾಗಿಯೇ ಪ್ರತ್ಯೇಕ ಪಾಲಿಕೆ ಆಗುತ್ತಿಲ್ಲ. ಜತೆಗೆ ಸಾಮಾನ್ಯ ಸಭೆಯಲ್ಲಿ ಬೃಹತ್‌ ಮಹಾನಗರ ಪಾಲಿಕೆಗೆ ಠರಾವು ಪಾಸ್‌ ಮಾಡಲಾಗಿದೆ. ಇದೆಲ್ಲವೂ ರಾಜಕೀಯ ಲಾಭ ಹಾಗೂ ಕ್ರೆಡಿಟ್‌ ಪಡೆಯಲು ಅಲ್ಲದೇ ಮತ್ತೇನಿಲ್ಲ. ಒಟ್ಟಾರೆ ಪಾಲಿಕೆ ರಚನೆಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲಹೊತ್ತು ಜ್ಯುಬಿಲಿ ವೃತ್ತವನ್ನು ಬಂದ್‌ ಮಾಡಿ ತಮಟೆ ಬಾರಿಸುತ್ತ ಪ್ರತಿಭಟನಾಕಾರರು ಬಿಜೆಪಿ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಸಚಿವರೇ ರಾಜ್ಯಪಾಲರ ಮೇಲೆ ರಾಜಕೀಯ ಒತ್ತಡ ತಂದು ಆ ಕಡತವನ್ನು ತಡೆಹಿಡಿಯುವ ಕೆಲಸ ಮಾಡಿದ್ದಾರೆ. ಈಗ ತಾವೇನೂ ಅರಿಯದವರಂತೆ ಹೋರಾಟಗಾರರಿಗೆ ಪತ್ರ ಬರೆದು, ರಾಜ್ಯಪಾಲರೊಂದಿಗೆ ಸಭೆ ನಡೆಸಲು ಸಮಯ ಕೇಳಿದ್ದೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಒಂದೆಡೆ ರಾಜ್ಯಪಾಲರ ಮೂಲಕ ಫೈಲ್ ತಡೆಹಿಡಿಯುವುದು, ಇನ್ನೊಂದೆಡೆ ತಾವೇ ಸಭೆ ನಡೆಸಿ ಬಗೆಹರಿಸುವುದಾಗಿ ಪತ್ರ ಬರೆಯುವುದು ಕೇವಲ ರಾಜಕೀಯ ಗಿಮಿಕ್ ಎಂದು ಅರವಿಂದ ಏಗನಗೌಡರ ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮಣ ಬಕ್ಕಾಯಿ, ಈಶ್ವರ ಶಿವಳ್ಳಿ, ಬಸವರಾಜ ಜಾಧವ ಸೇರಿದಂತೆ ಹೋರಾಟಗಾರರು ಇದ್ದರು.

ಬಾಹ್ಯ ಬೆಂಬಲ

ಇನ್ನು, ಪ್ರತ್ಯೇಕ ಪಾಲಿಕೆಗೆ ಸಂಪೂರ್ಣ ಬೆಂಬಲ ಇದೆ ಎಂದು ಅಖಿಲ ಭಾರತ ವಿರಶೈವ ಮಹಾಸಭಾ ಅಧ್ಯಕ್ಷ ಪ್ರದೀಪ ಪಾಟೀಲ ಹಾಗೂ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್‌ ಬೆಂಬಲ ವ್ಯಕ್ತಪಡಿಸಿದರು. ಜತೆಗೆ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಹಾಗೂ ನಿವೃತ್ತ ನೌಕರರ ರಾಜ್ಯ ಸಂಘ ಬೆಂಬ ವ್ಯಕ್ತಪಡಿಸಿತು.


ನನ್ನ ಸುದೀರ್ಘ ಹೋರಾಟದ ಜೀವನದಲ್ಲಿ ಇಂತಹ ನೂರಾರು ಪತ್ರಗಳನ್ನು ನೋಡಿದ್ದೇನೆ. ಅವರನ್ನು ಭೇಟಿ ಮಾಡಿಸುವೆ ಎಂಬ ಪತ್ರಗಳಿಗೆ ಯಾವುದೇ ಬೆಲೆಯಿಲ್ಲ. ಜನಪ್ರತಿನಿಧಿಗಳಿಗೆ ನಿಜವಾದ ಇಚ್ಛಾಶಕ್ತಿಯಿದ್ದರೆ, ತಾವೇ ಖುದ್ದಾಗಿ ಹೋಗಿ ರಾಜ್ಯಪಾಲರಿಂದ ಅಂಕಿತ ಹಾಕಿಸಿ ಪ್ರತ್ಯೇಕ ಪಾಲಿಕೆ ಘೋಷಿಸಲಿ ಎಂದು ಹೋರಾಟಗಾರ ಬಿ.ಡಿ. ಹಿರೇಮಠ ಆಗ್ರಹಿಸಿದ್ದಾರೆ.