ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ಜ.1 ರಿಂದ ಕೊಡಬೇಕಿರುವ ತುಟ್ಟಿ ಭತ್ಯೆ ತಡೆ ಹಿಡಿದಿರುವುದನ್ನು ಖಂಡಿಸಿ ಬಿಎಸ್‌ಎನ್‌ಎಲ್ ಪಿಂಚಣಿದಾರ ಜಂಟಿ ವೇದಿಕೆಯವರು ನಗರದ ಜಯಲಕ್ಷ್ಮಿಪುರಂನಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ಪ್ರತಿಭಟಿಸಿದರು.ತುಟ್ಟಿ ಭತ್ಯೆ ತಡೆ ಹಿಡಿದಿರುವ ಕ್ರಮ ನಿರಾಧಾರ, ಅರ್ಥಹೀನ ಮತ್ತು ಅಸಂಬದ್ಧ. ಡಿಒಟಿ ಸೇವೆಯಿಂದ ಬಿಎಸ್‌ಎನ್‌ಎಲ್‌ ಗೆ ಅಭಿಯುಕ್ತಿಗೊಂಡ ನೌಕರರನ್ನು ನಿವೃತ್ತಿಯ ನಂತರ ಕೇಂದ್ರ ಸರ್ಕಾರದ ಪಿಂಚಣಿದಾರರೆಂದು ಪರಿಗಣಿಸುವುದಾಗಿ ಬಿಎಸ್‌ಎನ್‌ಎಲ್ ಸ್ಥಾಪನೆಯಾದ ವರ್ಷದ (2000) ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನವಾಗಿದೆ. ಅವರ ಪಿಂಚಣಿ ಮತ್ತು ತುಟ್ಟಿ ಭತ್ಯೆಯನ್ನು ನೌಕರರು ಸೇವೆಯಲ್ಲಿದ್ದಾಗ ವಂತಿಗೆ ರೂಪದಲ್ಲಿ ಕೊಟ್ಟಿರುವ ಸಂಚಿತ ನಿಧಿಯಿಂದ ಕೊಡಲ್ಪಡುತ್ತದೆಯೇ ಹೊರತು ಯಾವುದೇ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಯಿಂದ ಪಿಂಚಣಿ ಕೊಡುವುದಿಲ್ಲ ಎಂದು ಅವರು ತಿಳಿಸಿದರು.ಹೀಗಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯ ಲಾಭ- ನಷ್ಟದ ಆಧಾರದ ಮೇಲೆ ಪಿಂಚಣಿದಾರರ ತುಟ್ಟಿ ಭತ್ಯೆ ತಡೆಹಿಡಿಯುವುದು ಅನೈತಿಕ ಮತ್ತು ಅಸಂಬದ್ಧ. ಈ ಕೂಡಲೇ ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ ಜ.1 ರಿಂದ ಕೊಡಬೇಕಿರುವ ತುಟ್ಟಿ ಭತ್ಯೆ ನೀಡಬೇಕು ಎಂದು ಅವರು ಒತ್ತಾಯಿಸಿದರು.ವೇದಿಕೆಯ ಪದಾಧಿಕಾರಿಗಳಾದ ಎಸ್. ವಿಷಕಂಠಮೂರ್ತಿ, ರಾಜಶೇಖರ್, ಬಸವರಾಜು ಮೊದಲಾದವರು ಇದ್ದರು.