ಬೀದರ್: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಒಬ್ಬರೂ ಬ್ರಾಹ್ಮಣ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಅತ್ಯಂತ ನೋವು, ಬೇಸರ ಹಾಗೂ ಆಘಾತವನ್ನುಂಟು ಮಾಡಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ರಮೇಶ ಕುಲಕರ್ಣಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯದ ನಂತರ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬ್ರಾಹ್ಮಣ ಸಮಾಜವು ಶಿಕ್ಷಣ, ಆಡಳಿತ, ನ್ಯಾಯಾಂಗ, ವೈದ್ಯಕೀಯ, ವಿಜ್ಞಾನ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಪಾರ ಕೊಡುಗೆ ನೀಡಿದೆ. ರಾಜ್ಯದ ಅಭಿವೃದ್ಧಿಗೆ ತನ್ನ ಜ್ಞಾನ, ಸೇವೆ ಮತ್ತು ಪ್ರಾಮಾಣಿಕತೆಯ ಮೂಲಕ ನಿರಂತರವಾಗಿ ಶ್ರಮಿಸಿರುವ ಈ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಕನಿಷ್ಠ ಒಬ್ಬ ಪ್ರತಿನಿಧಿಗೂ ಅವಕಾಶ ನೀಡದಿರುವದು ಅತ್ಯಂತ ವಿಷಾದನೀಯ ಸಂಗತಿ ಎಂದಿದ್ದಾರೆ.ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ವರ್ಗಗಳಿಗೂ ಸಮಾನ ಗೌರವ ಮತ್ತು ಪ್ರಾತಿನಿಧ್ಯ ನೀಡುವದು ಪ್ರಜಾಪ್ರಭುತ್ವದ ಮೂಲಭೂತ ಆಶಯವಾಗಿದೆ, ಆದರೆ ಈ ಬಾರಿ ಬ್ರಾಹ್ಮಣ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಲಕ್ಷಾಂತರ ಬ್ರಾಹ್ಮಣ ಕುಟುಂಬಗಳ ಮನಸ್ಸಿಗೆ ಆಳವಾದ ನೋವು ಉಂಟು ಮಾಡಿದೆ ಎಂದು ತಿಸಿಸಿದ್ದಾರೆ.
ಎಲ್ಲ ಸಮಾಜಗಳಂತೆ ಬ್ರಾಹ್ಮಣ ಸಮಾಜವೂ ಸಮಾನ ಗೌರವ ಮತ್ತು ನ್ಯಾಯಯುತ ಪ್ರಾತಿನಿಧ್ಯವನ್ನು ನಿರೀಕ್ಷಿಸುತ್ತದೆ. ಯಾವುದೇ ಸಮುದಾಯವನ್ನು ಸಂಪೂರ್ಣವಾಗಿ ಹೊರಗಿಡುವುದು ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಮನೋಭಾವಕ್ಕೆ ಪೂರಕವಲ್ಲ ಎಂದು ರಮೇಶ ಕುಲಕರ್ಣಿ ಹೇಳಿದ್ದಾರೆ.