ಕೊಪ್ಪಳ: ನಗರದ ತಾಪಂ ಕಚೇರಿ ಎದುರು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸ ತಾಲೂಕಿನಲ್ಲಿ ಸಮರ್ಪಕವಾಗಿ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.

ತಾಲೂಕಿನ ಗ್ರಾಮೀಣ ಜನ ಉದ್ಯೋಗ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗುವುದು ದಿನನಿತ್ಯ ನಡೆದಿದೆ ಇಂಥದರಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ ಉದ್ಯೋಗ ಒದಗಿಸಲು ಗ್ರಾಪಂ ಮುಂದಾಗುತ್ತಿಲ್ಲ ಇಲ್ಲಸಲ್ಲದ ತಾಂತ್ರಿಕ ದೋಷ ಹೇಳಿ ನುಣಚಿಕೊಳ್ಳುತ್ತಿದ್ದಾರೆ. ನಮ್ಮ ಸಂಘದ ಮುಖಂಡರು ಗ್ರಾಮೀಣ ಜನರು ಪಂಚಾಯ್ತಿಗಳಿಗೆ ಉದ್ಯೋಗ ಕೇಳಲು ಹೋಗಿ ಅಲೆದಾಡಿ ರೋಷಿ ಹೋಗಿದ್ದಾರೆ.

ಗ್ರಾಪಂಗಳಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಕೇಳಿದರೆ ಊರಲ್ಲಿ ಬೇರೆ ಬೇರೆ ಮೇಟುಗಳು ಉದ್ಯೋಗಕ್ಕೆ ಅರ್ಜಿ ಕೊಟ್ಟಿಲ್ಲ ಹಾಗಾಗಿ ನೀವು ಸುಮ್ಮನೆ ಇರಬೇಕು ಊರಲ್ಲಿ ಎಲ್ಲರೂ ಫಾರಂ ನಂ.೦೬- ಕೊಡುವವರೆಗೂ ಉದ್ಯೋಗ ನೀಡಲು ಆಗುವುದಿಲ್ಲ ಎಂದು ಉದ್ಯೋಗ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಜನರು ಉದ್ಯೋಗಕ್ಕಾಗಿ ಫಾರಂ ನಂ. ೬ನ್ನು ಸಲ್ಲಿಸಿ ತಿಂಗಳು ಕಳೆದರೂ ಗ್ರಾಪಂ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿಲ್ಲ ಆದ ಕಾರಣ ಈ ಮನವಿ ಮೂಲಕ ಬೇಡಿಕೆ ತ್ವರಿತಗತಿಯಲ್ಲಿ ಈಡೇರಿಸಬೇಕು.

ತಾಲೂಕಿನಲ್ಲಿ ಗ್ರಾಪಂಗಳಿಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ತಿಂಗಳು ಕಳೆದಿವೆ. ಹಾಗಾಗಿ ಕೂಲಿ ಕಾರ್ಮಿಕರಿಗೆ ಉದ್ಯೋಗ ತ್ವರಿತಗತಿಯಲ್ಲಿ ನೀಡಬೇಕು. ತಾಲೂಕಿನ ಕೋಳೂರು ಗ್ರಾಪಂ ಚಿಕ್ಕ ಸಿಂದೋಗಿ ಗ್ರಾಮ ಮಂಗಳಾಪುರ ಗ್ರಾಮ ಕೂಲಿ ಕಾರ್ಮಿಕರಿಗೆ ಉದ್ಯೋಗ ತ್ವರಿತಗತಿಯಲ್ಲಿ ಒದಗಿಸಬೇಕು. ತಾಲೂಕಿನಲ್ಲಿ ಗ್ರಾಪಂ ಉಖಾಯೋ ಎನ್ಎಂಆರ್ ನಲ್ಲಿ ನಮೂದು ಮಾಡದೆ ಕೆಲವರನ್ನು ಕೈಬಿಡುವ ಕೆಲಸ ಮಾಡುತ್ತಿದ್ದಾರೆ ಅದನ್ನು ಸರಿಪಡಿಸಿ ಎಲ್ಲ ಫಲಾನುಭವಿಗಳಿಗೆ ಉದ್ಯೋಗ ಒದಗಿಸಬೇಕು. ತಾಲೂಕಿನ ಗ್ರಾಪಂಗಳಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಲೋಪದೋಷ ಸರಿಪಡಿಸಿ ಬ್ಯಾಂಕ್ ಗಳಿಂದ ಆಗುತ್ತಿರುವ ತಾಂತ್ರಿಕ ದೋಷ ಸರಿಪಡಿಸಿ ಕೂಲಿ ಕಾರ್ಮಿಕರಿಗೆ ತ್ವರಿತಗತಿಯಲ್ಲಿ ಕೂಲಿ ಹಣ ಪಾವತಿ ಮಾಡಬೇಕು.ಗ್ರಾಪಂಗಳಲ್ಲಿ ಉ ಖಾ ಯೋ ಕೆಲಸ ಒದಗಿಸಲು ಎಲ್ಲರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಮಾತ್ರ ಉದ್ಯೋಗ ನೀಡುತ್ತೇವೆ ಎನ್ನುವುದನ್ನು ತಡೆಯಬೇಕು, ಕೆಲಸಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಕಾಲದಲ್ಲಿ ಉದ್ಯೋಗ ಒದಗಿಸಬೇಕು. ಕೋಳೂರು ಗ್ರಾಪಂ ಮಂಗಳಾಪುರ ಗ್ರಾಮ ಕೂಲಿ ಕಾರ್ಮಿಕರಿಗೆ ಕಳೆದ ಎನ್ ಎಂ ಆರ್ ನಲ್ಲಿ ಕೆಲವು ಕೂಲಿ ಕಾರ್ಮಿಕರಿಗೆ ಹಣ ಪಾವತಿ ಆಗಿರುವುದಿಲ್ಲ ಹಾಗಾಗಿ ಬಡ ಕೂಲಿಕಾರರಿಗೆ ದುಡಿದ ಕೂಲಿ ಹಣ ಪಾವತಿ ಮಾಡಬೇಕು. ಕೋಳೂರು ಗ್ರಾಪಂ ಚಿಕ್ಕಸಿಂದೋಗಿ ಗ್ರಾಮದ ಕೂಲಿ ಕಾರ್ಮಿಕರಿಗೆ ಹೊಸದಾಗಿ ಜಾಬ್ ಕಾರ್ಡ್‌ಗಳನ್ನು ನೀಡಬೇಕು.ಕೋಳೂರು ಗ್ರಾಪಂ ಚಿಕ್ಕ ಸಿಂದೋಗಿ ಗ್ರಾಮ ಕೂಲಿಕಾರರು ಕಳೆದ ಬಾರಿ ದುಡಿದಿರುವ ಕೂಲಿ ಹಣ ಸಕಾಲದಲ್ಲಿ ಪಾವತಿ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಕೆಲಸ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಆರೋಗ್ಯ ಪೆಟ್ಟಿಗೆ ವ್ಯವಸ್ಥೆ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘದ ಅಧ್ಯಕ್ಷೆ ಯಲ್ಲಮ್ಮ, ಕಾರ್ಯದರ್ಶಿ ಸಂಕಪ್ಪ ಗದಗ, ಕಾಲೇಸಾಬ್ ಕರಡಿ, ಮಹೇಶ, ಸುಶೀಲಮ್ಮ, ಮುಮ್ತಾಜ್ ಬೇಗಂ ಕರಡಿ, ಹುಲುಗಪ್ಪ ಗೋಕಾವಿ, ಹುಸೇನಸಾಬ್ ನದಾಫ್, ಅಮರವ್ವ ಗದಗ, ಗಂಗಪ್ಪ ಕೊರವರ, ಫಕೀರಮ್ಮ ಮಿರಗನತಂಡಿ, ಶರಣಮ್ಮ, ಶಾಂತಮ್ಮ ಬೆಂಗಳೂರು ಇತರರಿದ್ದರು.