ಹೂವಿನಹಡಗಲಿ: ಉತ್ತರ ಕರ್ನಾಟಕದ ಅಭಿವೃದ್ಧಿಯ ಸ್ಥಿತಿಗತಿಯು ಪ್ರಸ್ತುತ ಮಿಶ್ರ ಪ್ರತಿಕ್ರಿಯೆಗಳಿಂದ ಕೂಡಿದ್ದು, ಒಂದು ಪ್ರದೇಶ ಮೂಲಸೌಕರ್ಯ ಮತ್ತು ತಾಂತ್ರಿಕ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿದ್ದರೆ, ಮತ್ತೊಂದೆಡೆ ಪ್ರಾದೇಶಿಕ ಅಸಮಾನತೆಯ ಸವಾಲುಗಳು ಡಿ.ಎಂ. ನಂಜುಂಡಪ್ಪ ವರದಿ, ಇತ್ತೀಚಿನ ಗೋವಿಂದರಾವ್ ವರದಿಯಂತೆ ಹಾಗೆಯೇ ಉಳಿದಿದ್ದು ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆ ಯಾವಾಗ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ.ಸತೀಶ್ ಹೇಳಿದರು.
ಕಸಾಪ ತಾಲೂಕು ಘಟಕ, ಇಟ್ಟಗಿ ಹೋಬಳಿ ಘಟಕ ತಾಲೂಕಿನ ಮಹಾಜನದಹಳ್ಳಿ ಗ್ರಾಮದ ತಿಗರಿ ಕರಿಯಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪಾಟೀಲ್ ಅನ್ನದಾನಗೌಡರ, ಪಾಟೀಲ್ ಚನ್ನನಗೌಡರ ಸ್ಮಾರಕದತ್ತಿ, ನಂದಿಹಳ್ಳಿ ಹಾಲಪ್ಪ ದತ್ತಿ, ಟಿ.ಎಸ್. ಮೃತ್ಯುಂಜಯಪ್ಪ ಸ್ಮಾರಕ ದತ್ತಿ, ಮುದ್ದಿ ನಿಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿಯ ಸ್ಥಿತಿಗತಿಗಳು ವಿಷಯ ಕುರಿತು ಮಾತನಾಡಿದರು.ಇತ್ತೀಚಿನ ಎಂ.ಗೋವಿಂದ ರಾವ್ ಸಮಿತಿ ವರದಿಯ ಪ್ರಕಾರ, ರಾಜ್ಯದ ಒಟ್ಟು ಹಿಂದುಳಿದ ತಾಲೂಕುಗಳಲ್ಲಿ ಸುಮಾರು ಶೇ.60 ರಷ್ಟು ಉತ್ತರ ಕರ್ನಾಟಕದಲ್ಲಿಯೇ ಇವೆ. ರಾಜ್ಯದಲ್ಲಿ ಒಟ್ಟು 177 ತಾಲೂಕುಗಳನ್ನು ಹಿಂದುಳಿದ ಪಟ್ಟಿಗೆ ಸೇರಿಸಲಾಗಿದ್ದು, ಕಲ್ಯಾಣ ಕರ್ನಾಟಕದ ಯಾವುದೇ ತಾಲೂಕು ಅಭಿವೃದ್ಧಿ ಹೊಂದಿದ ವರ್ಗಕ್ಕೆ ಸೇರಿಲ್ಲ ಎಂಬುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಸಿ.ಗುರುಬಸವರಾಜ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಸಾಹಿತ್ಯಿಕ, ಸಾಂಸ್ಕೃತಿಕ ಒಲವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಸಾಹಿತಿ ಕಾರ್ತಿಕ ಆಚಾರ್ಯ, ಎಂ.ನಿಂಗರಾಜ ದತ್ತಿ ಉಪನ್ಯಾಸ ಕಾರ್ಯಕ್ರಮದ ಕುರಿತು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜ್ಞಾನ ಶಿಕ್ಷಕ ಎಂ.ಕೊಟ್ರೇಶ್ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಕವನ ವಾಚನ, ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿದವು. ಅಧ್ಯಕ್ಷತೆಯನ್ನು ಜಿ.ಬಿ.ವಿನಯರಾಜ ಆಚಾರ್ಯ ವಹಿಸಿದ್ದರು. ಶಿಕ್ಷಕಿ ಸರ್ವಮಂಗಳ ವಂದಿಸಿದರು. ಕನ್ನಡ ಶಿಕ್ಷಕ ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.