ಕಾವೇರಿ ನದಿಯ ನೀರನ್ನು ಕಲುಷಿತಗೊಳಿಸದೆ ಸ್ವಚ್ಛವಾಗಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ ಕಾವೇರಿ ನದಿಯ ನೀರನ್ನು ಕಲುಷಿತಗೊಳಿಸದೆ ಸ್ವಚ್ಛವಾಗಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ- ಕೊಪ್ಪ ಸೇತುವೆಯ ಎರಡು ಭಾಗಗಳಲ್ಲಿ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಕಬ್ಬಿಣದ ಬೇಲಿ ನಿರ್ಮಾಣ ಮತ್ತು ವಿದ್ಯುತ್ ಬೀದಿ ದೀಪಗಳ ಅನಾವರಣ ನೆರವೇರಿಸಿದ ಶಾಸಕರು ಕುಶಾಲನಗರ ಪುರಸಭೆ ನೇತೃತ್ವದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯ ಸಿ ಎಸ್ ಆರ್ ಫಂಡ್ ಮೂಲಕ ಸುಮಾರು 8.5 ಲಕ್ಷ ರು ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಾಮಗಾರಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಿದೆ. ಈ ಸಂಬಂಧ ಸಹಕರಿಸಿದ ಬ್ಯಾಂಕ್ ಅಧಿಕಾರಿಗಳ ಕಾಮಗಾರಿಗೆ ಸಹಾಯಹಸ್ತ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರು ಯಾವುದೇ ಸಂದರ್ಭ ನದಿಗೆ ತ್ಯಾಜ್ಯಗಳನ್ನು ಸುರಿಯುವುದು ಅಥವಾ ಹರಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಕುಶಾಲನಗರ ಕೊಪ್ಪ ಗಡಿಭಾಗದಲ್ಲಿರುವ 180 ವರ್ಷಗಳ ಹಳೆಯ ಸೇತುವೆಯ ಪುನಶ್ಚೇತನ ಕಾಮಗಾರಿ ಸದ್ಯದಲ್ಲೇ ನಡೆಸಲು ಚಿಂತನೆ ಹರಿಸಲಾಗಿದ್ದು ಈ ಸಂಬಂಧ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕುಶಾಲನಗರ ಶಾಖೆಯ ವ್ಯವಸ್ಥಾಪಕರಾದ ಸಿದ್ದಾಂತ್, ಮತ್ತು ಸಿಬ್ಬಂದಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಂಜುನಾಥ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಜೋಸೆಫ್ ವಿಕ್ಟರ್ ಸೋನ್ಸ್, ಮುಖ್ಯ ಅಧಿಕಾರಿ ಟಿ ಜೆ ಗಿರೀಶ್, ವಲಯ ಅರಣ್ಯಾಧಿಕಾರಿ ರಕ್ಷಿತ್, ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತಿತರರು ಇದ್ದರು.