ಕನ್ನಡಪ್ರಭ ವಾರ್ತೆ ಕೆರೂರ

ಲಂಚ ಸ್ವೀಕರಿಸುವ ವೇಳೆ ಕೆರೂರ ಪಿಎಸ್‌ಐ ಭೀಮಪ್ಪ ರಬಕವಿ ಹಾಗೂ ಕಾನ್‌ಸ್ಟೇಬಲ್‌ ಸಂತೋಷ ಬಿರಾದಾರ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬೆಳಗಂಟಿ ಗ್ರಾಮದ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಕೊಟ್ಟ ದೂರಿನಂತೆ ಏ.17 ರಂದು ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳ ಅವರನ್ನು ಮೋಟಾರ್‌ ಸೈಕಲ್‌ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ಜೂಜು ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದಿಯಾ ಎಂಬ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗಿತ್ತು. ನಂತರ ವಾಹನ ಬಿಡುಗಡೆ ಕೇಸು ದಾಖಲಿಸಬಾರದೆಂದರೆ ₹1.70 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಏ.18 ರಂದು ರಾತ್ರಿ ಶಂಕ್ರಪ್ಪ ಬೂದಿಹಾಳ ಪೊಲೀಸ್‌ ಠಾಣೆಯಿಂದ ಬಿಟ್ಟು ಕಳಿಸಲಾಗಿತ್ತೆಂದು ದೂರಿನಲ್ಲಿ ದಾಖಲಿಸಲಾಗಿದೆ.

ಏ.22 ರಂದು ದೂರುದಾರರಿಂದ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ದಾಳಿಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಎಂ.ಬಿ.ನಂದಗಾವಿ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುರೇಶರೆಡ್ಡಿ ಎಂ.ಎಸ್‌ ಪಿಐ ಬಿ.ಎ.ಬಿರಾದರ, ಎಂ.ಬಿ.ಬಿರಾದಾರ ಮತ್ತು ಎನ್‌.ಆರ್‌ ಖಿಲಾರೆ ಸೇರಿದಂತೆ ಸಿಬ್ಬಂದಿ ದಾಳಿ ನಡೆಸಿ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.